ತೀರ್ಥಹಳ್ಳಿ: ಯುವಕನೊಬ್ಬ ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಗಾರ್ಡರಗದ್ದೆಯಲ್ಲಿ ನಡೆದಿದೆ.
ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ತೀರ್ಥಹಳ್ಳಿಯ ಶಿವರಾಜಪುರದಗ್ರಾಮದ ಸತೀಶ್(38) ಎಂಬಾತನಿಗೆ ಸಾರ್ವಜನಿಕರು ಗೂಸಾ ನೀಡ್ದ್ದು ಪೋಲೀಸರಿಗೆ ಒಪ್ಪಿಸಿದ್ದಾರೆ.
25 ವರ್ಷದ ವಿಕಲ ಚೇತನ ಯುವತಿಯನ್ನು ಅವಳ ವೀಲ್ ಚೇರ್ಗೆ ಕಟ್ಟಿ ಹಾಕಿ ಅತ್ಯಾಚಾರಕ್ಕೆ ಸತೀಶ್ ಯತ್ನ ನಡೆಸಿದ್ದ ಆ ವೇಳೆ ಯುವತಿ ಗಟ್ಟಿಯಾಗಿ ಕೂಗಿದ್ದಾಳೆ. ಇದರಿಂದ ನೆರೆಹೊರೆಯವರು, ಗ್ರಾಮಸ್ಥರು ಆಗಮಿಸಿದ್ದು ಸತೀಶ್ ನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಬಳಿಕ ಆತನನ್ನು ಪೋಲೀಸರಿಗೆ ಒಪ್ಪಿಸಲಾಗಿದೆ.
ಆರೋಪಿ ಸತೀಶ್ ವಿವಾಹಿತನಾಗಿದ್ದು ಪತ್ನಿಯ ಸಹೋದರನ ಮನೆಗೆ ಆಗಮಿಸಿದ್ದನೆನ್ನಲಾಗಿದೆ. ಆದರೆ ವಿಕಲಚೇತನ ಯುವತಿ ಒಬ್ಬಳೇ ಇದ್ದ ವೇಳೆ ಆಕೆಯ ಮನೆಗೆ ನುಗ್ಗಿದ ಸತೀಶ್ ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಧ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.