ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಭಾರೀ ಮಳೆಯಾಗಿದ್ದು ಸಿಡಿಲಿನ ಹೊಡೆತಕ್ಕೆ ಓರ್ವ ಸಾವನ್ನಪ್ಪಿದ್ದಾನೆ.
ಸುಬ್ರಹ್ಮಣ್ಯದಲ್ಲಿರುವ ಖಾಸಗಿ ವಸತಿ ಗೃಹಕ್ಕೆ ಸಿಡಿಲು ಬಡಿದಿದ್ದು ಕಾರ್ಮಿಕನಾಗಿದ್ದ ಪ್ರವೀಣ್ (20) ಮೃತಪಟ್ಟಿದ್ದಾನೆ. ಈತ ಹರಿಹರ ಪಳ್ಳತ್ತಡ್ಕ ಮೂಲದವನೆನ್ನಲಾಗಿದೆ.
ಸಿಡಿಲಿನಿಂದ ಗಾಯಗೊಂಡ ಪ್ರವೀಣ್ ಅನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲೇ ಆತ ಮೃತನಾಗಿದ್ದಾನೆ ಎಂದು ವೈದ್ಯರು ಘೋಷಿಸಿದರು.
ಇದ್ದಕ್ಕಿದ್ದಂತೆ ಸುರಿದ ಮಳೆಯ ಕಾರಣ ಕೆಎಸ್ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಮಂಗಳೂರು ವಿವಿ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೂ ಅಡಚಣೆಯಾಗಿತ್ತು.