ಉಡುಪಿ: ಉಡುಪಿ ಜಿಲ್ಲೆ ಕೋಟಾದಲ್ಲಿ ನಡೆದ ಸ್ನೇಹಿತರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯತ್ ಸದಸ್ಯನೂ ಸೇರಿ ಆರು ಮಂದಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಜಿಲ್ಲಾ ಪಂಚಾತಯ್ ಸದಸ್ಯನನ್ನು ರಾಘವೇಂದ್ರ ಕಾಂಚನ್ (38) ಎಂದು ಗುರುತಿಸಲಾಗಿದೆ. ಈತ ಬಿಜೆಪಿ ಬೆಂಬಲಿತ ಸದಸ್ಯನಾಗಿದ್ದನು ಎನ್ನಲಾಗಿದೆ.
ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ರಾಜಶೇಖರ ರೆಡ್ಡಿ, ಜೆ. ರವಿ ಅಲಿಯಾಸ್ ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ ಮತ್ತು ರವಿ ಅಲಿಯಾಸ್ ರವಿಚಂದ್ರ ಪೂಜಾರಿ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರನ್ನು ಶುಕ್ರವಾರ ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳನ್ನು 8 ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಶೌಚಾಲಯ ಹೊಂಡದ ಜಾಗದ ವಿಚಾರವಾಗಿ ಜಗಳವಾಗಿದ್ದಾಗ ತಮ್ಮ ಸ್ನೇಹಿತ ರೋಹಿತ್ ಪರ ಮಾತನಾಡಲು ತೆರಳಿದ್ದ ಇಬ್ಬರು ಯುವಕರನ್ನು ಜನವರಿ 27ರ ಮುಂಜಾನೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿತ್ತು.
ಪ್ರಕರಣದಲ್ಲಿ ಭಾಗಿಗಳಾದವರಲ್ಲಿ ಮೂವರು ರೌಡಿ ಶೀಟರ್ ಗಳಾಗಿದ್ದು ಇನ್ನುಳಿದ ಆರೋಪಿಗಳ ಶೋಧಕಾರ್ಯ ಮುಂದುವರಿದಿದೆ.