ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು
ಬೆಂಗಳೂರು: ಮಾನಸಿಕ ಆರೋಗ್ಯಕ್ಕೆ ಶಾರೀರಿಕವಾಗಿ ಸದೃಢರಾಗಿರಬೇಕು ಎಂದು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಅವರು ನಿನ್ನೆ ಬೆಂಗಳೂರಿನ ಹೆಣ್ಣೂರು-ಬಗಲೂರು ರಸ್ತೆಯಲ್ಲಿ ಸಿಎಂಆರ್ ವಿಶ್ವವಿದ್ಯಾಲಯ ಕ್ಯಾಂಪಸ್ ಮತ್ತು ಹಾಸ್ಟೆಲ್ ನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ದೇಶ ಕ್ರೀಡೆಯಲ್ಲಿ ಹಿಂದುಳಿದಿದೆ. ಇದಕ್ಕೆ ಬಹಳ ಮುಖ್ಯ ಕಾರಣ ಶಾಲಾ, ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಕ್ರೀಡಾ ಚಟುವಟಿಕೆಗಳಿಗೆ ಮಕ್ಕಳಿಗೆ ಕಡಿಮೆ ಉತ್ತೇಜನ ನೀಡುವುದರಿಂದ ಎಂದು ಅಭಿಪ್ರಾಯಪಟ್ಟರು.
ನಾನು ವಿದ್ಯಾರ್ಥಿಯಾಗಿದ್ದಾಗ ಎನ್ ಸಿಸಿ ಮತ್ತು ಎನ್ಎಸ್ಎಸ್ ಗೆ ಸೇರುವುದೆಂದರೆ ಮಕ್ಕಳಲ್ಲಿ ಉತ್ಸಾಹವಿತ್ತು. ಆದರೆ ಇಂದು ಅದು ಕಾಣೆಯಾಗಿದೆ. ಮಕ್ಕಳಿಗೆ ಶಾಲೆಯಲ್ಲಿ ಶಾರೀರಿಕ ತರಬೇತಿ ಕಡಿಮೆಯಾಗುತ್ತಿದೆ. ಮಕ್ಕಳು ಶಾಲೆಯಲ್ಲಿರುವ ಒಟ್ಟು ಅವಧಿಯ ಶೇಕಡಾ 50ರಷ್ಟು ಭಾಗವನ್ನು ಕ್ರೀಡೆಗೆ ಮೈದಾನದಲ್ಲಿ ಮತ್ತು ಇನ್ನು ಶೇಕಡಾ 50ರಷ್ಟು ಭಾಗವನ್ನು ತರಗತಿಯಲ್ಲಿ ಕಳೆಯಬೇಕು ಎಂದರು.
ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಜಾರಿಗೆ ತಂದ ಮೇಲೆ 171 ರಾಷ್ಟ್ರಗಳಲ್ಲಿ ಇಂದು ಜನರು ಯೋಗಭ್ಯಾಸ ಮಾಡುತ್ತಿದ್ದಾರೆ. ಅದಕ್ಕೆ ಜಾತಿ, ಧರ್ಮ, ಮೇಲು, ಕೀಳು ಎಂಬ ಭಾವವಿಲ್ಲ. ಯೋಗಭ್ಯಾಸ ಮಾಡುವುದು ಶರೀರ ಮತ್ತು ಶಾರೀರ ಚಟುವಟಿಕೆಗಳಿಗೆ ಹೊರತು ಮೋದಿಗೆ ಬೇಕಾಗಿ ಅಲ್ಲ ಎಂದರು.
ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಕೊರತೆ: ಭಾರತದಲ್ಲಿ ಇಂದು ಸುಮಾರು 800 ವಿಶ್ವವಿದ್ಯಾಲಯಗಳಿವೆ. ಆದರೆ ಶ್ರೇಷ್ಠ ಕೇಂದ್ರಗಳಿಗೆ ಕೊರತೆಯಿದೆ. ಏಳು ಹೊಸ ಐಐಟಿಗಳು, ಏಳು ಹೊಸ ಐಐಎಂಗಳು, ಎರಡು ಭಾರತೀಯ ವಿಜ್ಞಾನ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನೆ ಮತ್ತು 14 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಂತಹ ಶ್ರೇಷ್ಠ ಶಿಕ್ಷಣ ಕೇಂದ್ರಗಳ ಅಗತ್ಯ ಭಾರತಕ್ಕಿದೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos