ಮೈಸೂರು: ಪ್ರೀತಿಸಿದ್ದ ಯುವಕ ನಂಬಿಸಿ ಕೈಬಿಟ್ಟ ಕಾರಣ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಇದೊಂದು ಲವ್-ಸೆಕ್ಸ್-ದೋಖಾ ಪ್ರಕರಣದಂತೆ ಕಂಡುಬಂದಿದ್ದು ಯುವತಿ ತನಗೆ ವಂಚಿಸಿದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾಳೆ.
ಅರ್ಪಿತಾ (19) ತಾನು ಲೋಕೇಶ್ ಗೌಡ(26) ಎಂಬಾತನನ್ನು ಪ್ರೀತಿಸುತ್ತಿದ್ದಳು. ಒಂದು ವರ್ಷದಿಂದ ಇಬ್ಬರೂ ಪ್ರೇಮಪಾಶದಲ್ಲಿ ಸಿಕ್ಕಿದ್ದರು.ತಾನು ಅರ್ಪಿತಾಳನ್ನೇ ವಿವಾಹವಾಗುವುದಾಗಿ ನಂಬಿಸಿದ್ದ ಗೌಡ ಆಕೆಯೊಡನೆ ದೈಹಿಕ ಸಂಪರ್ಕ ಸಹ ಮಾಡಿದ್ದ. ಯುವತಿ ಅರ್ಪಿತಾ ಸಹ ತನ್ನ ಪ್ರೇಮಿಯನ್ನು ಬಹಳವೇ ನಂಬಿದ್ದು ಅದಕ್ಕೆ ಒಪ್ಪಿಗೆ ಸೂಚಿಸಿದ್ದಳು. ಆದರೆ ಇದಾಗಿ ಕೆಲ ದಿನಗಳ ಹಿಂದೆ ಮನೆಯಲ್ಲಿ ನಮ್ಮ ವಿವಾಹಕ್ಕೆ ಒಪ್ಪುತ್ತಿಲ್ಲ ಎಂದು ಕುಂಟು ನೆಪ ಹೇಳಿದ ಗೌಡ ಅರ್ಪಿತಾಳಿಂದ ದೂರಾಗಿದ್ದಾನೆ.
ಆದರೆ ತಾನು ಪ್ರೀತಿಸಿದ ಯುವಕ ಸದಾ ನನ್ನಒಡನಿರುತ್ತಾನೆ ಎಂದೇ ನಂಬಿದ್ದ ಅರ್ಪಿತಾಗೆ ಇದರಿಂದ ಆಘಾತವಾಗಿದೆ. ಆಕೆ ಆತ್ಮಹತ್ಯೆಗೆ ನಿರ್ಧರಿಸಿದ್ದು "ನನ್ನನ್ನು ವಂಚಿಸಿದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ" ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾಳೆ.
ಸಧ್ಯ ವಂಚಕ ಪ್ರೇಮಿ ಲೋಕೇಶ್ ಗೌಡ ಪರಾರಿಯಾಗಿದ್ದಾನೆ. ಹುಣಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.