ಮೈಸೂರು: ಟಿ ನರಸೀಪುರದಲ್ಲಿ ನಡೆಯುತ್ತಿರುವ ಮೂರು ದಿನಗಳ ಕುಂಭ ಮೇಳಕ್ಕೆ ಭಾನುವಾರ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ತ್ರಿವೇಣಿ ಸಂಗಮಕ್ಕೆ ಸಾವಿರಾರು ಮಂದಿ ಆಗಮಿಸಿದ್ದರು.
ಮೊದಲ ದಿನ ಪ್ರಾತಃಕಾಲ ಸೂರ್ಯೋದಯಕ್ಕೂ ಮುನ್ನ ಬೆಳಗ್ಗೆ 4 ಗಂಟೆಯಿಂದಲೇ ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಗುಂಪು ಗುಂಪಾಗಿ ಮಾಘಮಾಸದ ಮಹೋದಯ ಪುಣ್ಯಸ್ನಾನ ಮಾಡಿ, ಪೂಜೆ ಸಲ್ಲಿಸಿ, ಪುನೀತರಾದರು.
ಕಾವೇರಿ, ಕಪಿಲಾ ಮತ್ತು ಸಪ್ತಿಕಾ ನದಿಗಳು ಸೇರುವ ಸ್ಥಳವೇ ತ್ರಿವೇಣಿ ಸಂಗಮ, ಇಲ್ಲಿಗೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಜೆಎಸ್ ಎಸ್ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ರಂಭಾಪುರಿ ಸ್ವಾಮೀಜಿ 1989 ರಲ್ಲಿ ಈ ಪುಣ್ಯ ಸ್ನಾನ ಪದ್ಧತಿ ಆರಂಭಿಸಿದ್ದರು.
ಭಾನುವಾರ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಕುಂಭ ಮೇಳಕ್ಕೆ ಚಾಲನೆ ನೀಡಲಾಯಿತು, ತ್ರಿವೇಣಿ ಸಂಗಮದಲ್ಲಿ (ನಡುಹೊಳೆ ಬಸಪ್ಪ) ನಿರ್ಮಿಸಿರುವ ಯಾಗ ಮಂಟಪದಲ್ಲಿ ಬೆಳಗ್ಗೆ 9 ಗಂಟೆ ಅಂಕುರಾರ್ಪಣೆ, ಪುಣ್ಯಾಹ, ಗಣಪತಿ ಹೋಮ, ಪೂರ್ಣಾಹುತಿ, ಅಭಿಷೇಕ, ದೇವತಾರಾಧನೆ, ರಾಷ್ಟ್ರಾಶೀರ್ವಾದ, ಮಹಾ ಮಂಗಳಾರತಿ ನೆರವೇರಿಸುವುದರೊಂದಿಗೆ 11ನೇ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.