ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಳ್ಗಿಚ್ಚು: ವಾಯುಪಡೆ ಹೆಲಿಕಾಪ್ಟರ್ಗಳಿಂದ ಮುಂದುವರೆದ ಕಾರ್ಯಾಚರಣೆ
ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಳ್ಗಿಚ್ಚು ನಂದಿಸಲು ಸೋಮವಾರ ಸೇವೆಗೆ ಇಳಿದಿದ್ದ ವಾಯುಪಡೆ ಹೆಲಿಕಾಪ್ಟರ್ ಗಳು ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಎರಡೂ ಹೆಲಿಕಾಪ್ಟರ್ ಗಳು ಸೋಮವಾರ ಸಂಜೆ ತನಕ ಬೆಂಕಿಯನ್ನು ನಂದಿಸಲು 18 ಟನ್ನಷ್ಟು ನೀರು ಸಿಂಪಡಿಸಿದ್ದು, ಮಂಗಳವಾರವೂ ಇದೇ ಕಾರ್ಯಾಚರಣೆ ನಡೆಸುತ್ತಿವೆ.
ಕಾಳ್ಗಿಚ್ಚಿನಿಂದ ಸುಮಾರು 9 ರಿಂದ 10 ಸಾವಿರ ಎಕರೆ ಅರಣ್ಯ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರಿನಿಂದ ಎರಡೂ ಹೆಲಿಕಾಪ್ಟರ್ ಗಳು ಕಾರ್ಯನಿರ್ವಹಿಸುತ್ತಿವೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಎಲ್ಲಿ ನೋಡಿದರೂ ಬೂದಿ ಹಾಗೂ ಮರಗಳ ಅಸ್ಥಿಪಂಜರಗಳು ಮತ್ತು ಸುಟ್ಟು ಕರಕಲಾದ ಪ್ರಾಣಿಗಳ ದೇಹಗಳು ಕಾಣಿಸುತ್ತಿವೆ. ಮಂಗಳವಾರ ಬೆಳಿಗ್ಗೆ ಕಾಡಿನಲ್ಲಿ ಕಾಳ್ಗಿಚ್ಚು ಹಬ್ಬಿಲ್ಲ ಎಂದು ಬಂಡೀಪುರ ಉಸ್ತುವಾರಿ ಕ್ಷೇತ್ರ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದ್ದಾರೆ.
ಆದರೂ, ಯಾವುದೇ ಅನಾಹುತ ಸಂಭವಿಸದಂತೆ ಅರಣ್ಯ ಸಿಬ್ಬಂದಿ, ಅಗ್ನಿಶಾಮಕದಳ ಎಚ್ಚರಿಕೆ ವಹಿಸಿವೆ. ಮಂಗಳವಾರ ಬೆಳಿಗ್ಗೆ ಬೆಂಕಿ ವ್ಯಾಪಿಸಿದ ಚಲ್ಮಲಾ ಅರಣ್ಯದಲ್ಲಿ ವಾಯುಪಡೆಯ ಈ ಎರಡೂ ಹೆಲಿಕಾಪ್ಟಗಳು ನೀರನ್ನು ಸಿಂಪಡಿಸಿವೆ.
ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಸೋಮವಾರದಿಂದ ಕಾಡುಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಕಾಳ್ಗಿಚ್ಚು ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಬಹುಶಃ ಕರ್ನಾಟಕದಲ್ಲಿ ಮೊದಲ ಬಾರಿಗೆ ಮತ್ತು ದಕ್ಷಿಣ ಭಾರತದಲ್ಲಿ ಎರಡನೆಯ ಬಾರಿಗೆ ವಾಯಪಡೆ ಹೆಲಿಕಾಪ್ಟರ್ ಗಳನ್ನು ಕಾಳ್ಗಿಚ್ಚು ನಂದಿಸಲು ಬಳಸಿಕೊಳ್ಳಲಾಗುತ್ತಿದೆ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೋಮವಾರ ಹೆಲಿಕಾಪ್ಟರ್ಗಳನ್ನು ಒದಗಿಸುವಂತೆ ವಾಯುಪಡೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದರಂತೆ, ವಾಯುಪಡೆ, ಎರಡು ಎಂಐ -17 ವಿ 5 ಹೆಲಿಕಾಪ್ಟರ್ಗಳನ್ನು ನಿಯೋಜಿಸಿತ್ತು. 2014 ರಲ್ಲಿ ಆಂಧ್ರಪ್ರದೇಶ ತಿರುಮಲ ಬೆಟ್ಟದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ವಾಯುಪಡೆ ಹೆಲಿಕಾಪ್ಟರ್ಗಳನ್ನು ಬಳಸಿಕೊಳ್ಳಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos