ಬಳ್ಳಾರಿ: ಒಂದು ಕಾಲದಲ್ಲಿ ಇತಿಹಾಸ ಪ್ರಸಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ ಸಂಡೂರಿನ ಕುಮಾರಸ್ವಾಮಿ ರಿಸರ್ವ್ ಫಾರೆಸ್ಟ್ ವ್ಯಾಪ್ತಿಯ ದೇವಗಿರಿ ರೇಂಜ್ ನಲ್ಲಿ ಬರುವ ಕಮಾತುರ್ ಗ್ರಾಮ ಇಂದು ವಿವೇಚನಾರಹಿತ ಗಣಿಗಾರಿಕೆಗೆ ಬಲಿಯಾಗುತ್ತಿದೆ. ಇಲ್ಲಿನ ರಸ್ತೆಗಳು ಇಂದು ಕೆಂಧೂಳಿನ ನೆಲಹಾಸನ್ನು ಹೊದ್ದಿದೆ, ಗಣಿಗಾರಿಕೆಯಿಂದ ಉಂಟಾದ ಮಾಲಿನ್ಯಫ಼್ದ ಕಾರಣ ಗ್ರಾಮಸ್ಥರು ಅಸ್ತಮಾ ಮತ್ತಿತರೆ ಉಸಿರಾಟದ ತೊಂದರೆಯನ್ನು ಅನುಭವಿಸುವಂತಾಗಿದೆ. ಮನೆಗಳಿಗೆ ತೆರಳುವ ರಸ್ತೆಗಳ ಬಣ್ಣ ಕೆಂಪು ತಿರುಗಿದೆ, ಇನ್ನು ಮಳೆಗಾಲದಲ್ಲಂತೂ ಹಳ್ಳಿಯ ಜನ ಮನೆಯಿಂದ ಹೊರಗೆ ನಡೆದಾಡುವುದೇ ಕಷ್ಟಸಾಧ್ಯವಾಗಿದೆ. ಈ ಗ್ರಾಮದಲ್ಲಿ ಸಂಪರ್ಕಕ್ಕಾಗಿ ಇರುವ ಏಕೈಕ ರಸ್ತೆ ಬಳಕೆಗೆ ಗಣಿಗಾರಿಕೆ ಸಂಸ್ಥೆಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು! ಇದು ಸಮುದ್ರಮಟ್ಟದಿಂಡ 1,000 ಮೀಟರ್ ಗಳಷ್ಟು ಎತ್ತರದಲ್ಲಿರುವ ಹಳ್ಳಿಯ ಕಿರು ನೋಟ.
ಬೆಟ್ಟದ ಮೇಲಿರುವ ಈ ಗ್ರಾಮವು ಗಣಿಗಾರಿಕೆಯ ಕಾರಣ ಸಾಮಾನ್ಯ ಜನಜೀವನ ನಡೆಸಲು ಅಸಾಧ್ಯವೆಂಬ ಮಟ್ಟಕ್ಕೆ ಬಂದಿದೆ. ಈ ಗ್ರಾಮದ ಸುತ್ತ ಉತ್ತಮ ಗುಣಮಟ್ಟದ ಮ್ಯಾಂಗನೀಸ್, ಕಬ್ಬಿಣ ಅದಿರುಗಳು ಸಿಗುತ್ತದೆ. ಇದಕ್ಕಾಗಿ ಒಟ್ಟು ಗ್ರಾಮದ ಸುತ್ತ ಏಳು ಕಡೆ ಗಣಿಗಾರಿಕೆಗಾಗಿ ಸ್ಥಳವಿದ್ದು ಇದರಲ್ಲಿ ಮೂರು ಕಡೆಗಳಲ್ಲಿ ಇಂದಿಗೂ ಗಣಿಗಾರಿಕೆ ನಿರಂತರವಾಗಿ ನಡೆದಿದೆ.ವಿಶೇಷವೆಂದರೆ ಈ ಗ್ರಾಮದ ನಿವಾಸಿಗಳಾರೂ ಈ ಗಣಿಗಾರಿಕೆ ಸಂಸ್ಥೆಯಲ್ಲಿ ಉದ್ಯೋಗಕ್ಕಿಲ್ಲ. ಇನ್ನು ಶೈಕ್ಷಣಿಕ ವಿಚಾರಕ್ಕೆ ಬಂಡರೆ . ಗ್ರಾಮವು ಉತ್ತಮ ಸಾಕ್ಷರತೆ ಪ್ರಮಾಣವನ್ನು ಹೊಂದಿದೆ.
"ನಾವು ಅನೇಕ ವರ್ಷಗ್ಫ಼ಳಿಂದ ಗಣಿಗಾರಿಕೆ ಸಂಸ್ಥೆಗಳು ಹಾಗೂ ಸರ್ಕಾರಕ್ಕೆ ನಮ್ಮ ಗ್ರಾಮದ ಯುವಕರಿಗೆ ಉದ್ಯೋಗ ನೀಡುವಂತೆ ಮನವಿ ಸಲ್ಲಿಸಿದ್ದೆವು. ಆದರೆ ಇದ್ಯುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಯುವಕರು ಅನೇಕರು ಗಣಿ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರಿ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕರು ಡ್ರೈವರ್ ಕೆಲಸದಲ್ಲಿದ್ದಾರೆ. ನಮ್ಮ ಮಕ್ಕಳು ಶಾಲಾ ವಿದ್ಯಾಭ್ಯಾಸಕ್ಕಾಗಿ ಸಂಡೂರಿಗೆ ನಡೆದೇ ಹೋಗಬೇಕಾದ ದುಸ್ಥಿತಿ ಇದೆ" "ಗ್ರಾಮ ಪಂಚಾಯಿತಿ ಸದಸ್ಯ ಪೆನ್ನಯ್ಯ ಪತ್ರಿಕೆಗೆ ತಿಳಿಸಿದ್ದಾರೆ.
ಗ್ರಾಮವು ಉತ್ತಮ ವಿದ್ಯುತ್ ಸಂಪರ್ಕ ಹೊಂದಿದ್ದರೂ ವಿದ್ಯುತ್ ಪೂರೈಕೆಯಲ್ಲಿ ಆಗಾಗಾ ಕಡಿತವಾಗುತ್ತಿರುತ್ತದೆ.ಕುಮಾರಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಸಿಹಿ ನೀರಿನ ಮೂಲಗಳಿಂದ ಗ್ರಾಮಕ್ಕೆ ನಿರಂತರ ನೀರಿನ ಸೌಲಭ್ಯ ದೊರಕುತ್ತಿದೆ. ಆದರೆ ಇದನ್ನು ಕುಡಿಯುವ ನೀರಿಗಷ್ಟೇ ಬಳಸಲಾಗುತ್ತದೆ ಹೊರತು ಕೃಷಿ ಚಟುವಟಿಕೆಗಳಿಗಲ್ಲ. ಏಕೆಂದರೆ ಸುತ್ತಮುತ್ತ ನಡೆಯುವ ಗಣಿಗಾರಿಕೆಯ ಧೂಳಿನ ಕಾರಣ ಗ್ರಾಮದಲ್ಲಿ ಯಾವೊಂದು ಬೆಳೆ ಬೆಳೆದರೂ ಫಲ ಬರುವುದು ಕಡಿಮೆ, ದಶಕದ ಕಾಲದಿಂದ ಯಾವ ಬೆಳೆಯನ್ನು ಬೆಳೆಯುವಲ್ಲಿಯೂ ಗ್ರಾಮಸ್ಥರು ಸಫಲವಾಗಿಲ್ಲ.
ಇನ್ನು ಗ್ರಾಮದ ಆರೋಗ್ಯ ಕೇಂದ್ರ ಮುಚ್ಚಿ ಅದೆಷ್ಟೋ ದಿನಗಳಾಗಿದೆ, ಶಾಲಾ ಕಟ್ಟಡ ಶಿಥಿಲಾವಸ್ಥೆ ತ;ಲುಪಿದೆ.ಎನ್ಎಂಡಿಸಿ ಗಣಿ ಸಂಸ್ಥೆಯ ವೈದ್ಯರು ವಾರಕ್ಕೊಮ್ಮೆ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಅದೂ ಸಹ ಕೆಲವೇ ಗಂಟೆಗಳ ಮಟ್ಟಿಗೆ ಅವರು ಗ್ರಾಮದಲ್ಲಿ ಲಭ್ಯವಾಗಿರುತ್ತಾರೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.
"ವಿಜಯನಗರ ಕಾಲದಲ್ಲಿ ಈ ಸ್ಥಳ ಶಸ್ತ್ರಾಸ್ತ್ರಗಳ ತಯಾರಿಕೆಗಾಗಿ ಹೆಸರಾಗಿತ್ತು.ಆ ಕಾಲದಲ್ಲಿ ಇಲ್ಲಿ ಅನೇಕ ಕಮ್ಮಾರರ ಕುಟುಂಬಗಳಿದ್ದವು." ಎಂದು ಗಣಿ ಸಂಸ್ಥೆಯೊಂದರ ಮಾಜಿ ಮ್ಯಾನೇಜರ್ ಎವಿ ಸೋಮಶೇಖರ್ ಹೇಳಿದ್ದಾರೆ.
"ಕಮ್ಮ ತೆರವು(ಹಳ್ಳಿಯ ಮೂಲ ಹೆಸರು) ನಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು ಇದು ಗ್ರಾಮಸ್ಥರ ಆದಾಯ ಮೂಲವಾಗಿತ್ತು. ಆದರೆ ಗಣಿ ಹ್ಗೆಸರಲ್ಲಿ ಗ್ರಾಮವನ್ನು ಲೂಟಿ ಮಾಡಿದ ಬಳಿಕ ಗ್ರಾಮದ ಅವನತಿ ಪ್ರಾರಂಭವಾಗಿದೆ." ಸಂಡೂರು ಮೂಲದ ಜನಸಂಗ್ರಾಮ್ಪರಿಷತ್ ನ ಶ್ರೀಶೈಲ ಸಂಡೂರ್ ಹೇಳಿದ್ದಾರೆ.
"ನಾವು ಗ್ರಾಮಸ್ಥರ ಪರಿಸ್ಥಿತಿಯ ಬಗ್ಗೆ ಅರಿತಿದ್ದೇವೆ, ಈ ಗ್ರಾಮಕ್ಕಾಗಿಯೇ ವಿಶೇಷ ಅಂಬ್ಯುಲೆನ್ಸ್ ಒದಗಿಸಲಾಗಿದೆ.ಅಲ್ಲದೆ ಇನ್ನು ಆರು ತಿಂಗಳಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸಹ ಪೂರ್ಣಗೊಳ್ಳುತ್ತಿದೆ." ಬಳ್ಳಾರಿ ಜಿಲ್ಲಾಧಿಕಾರಿ ರಾಮ್ ಪ್ರಶಾಂತ್ ಮನೋಹರ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos