ರಾಜ್ಯ

ಸುಳವಾಡಿ ಪ್ರಕರಣ ನಂತರ ಸಂಪದ್ಭರಿತ ದೇವಾಲಯಗಳ ಮೇಲೆ ಸರ್ಕಾರದ ಕಣ್ಣು

Sumana Upadhyaya

ಮೈಸೂರು: ಸುಳವಾಡಿ ದೇವಸ್ಥಾನದಲ್ಲಿ ಪ್ರವಾಸ ಸೇವಿಸಿ 17 ಮಂದಿ ಮೃತಪಟ್ಟ ನಂತರ ಲಾಭ ತರುವ ಮುಜರಾಯಿ ಇಲಾಖೆಗೆ ಸೇರದ ಚಾಮರಾಜನಗರ ಜಿಲ್ಲೆಯ ದೇವಸ್ಥಾನಗಳಿಗೆ ಬಿಸಿ ಮುಟ್ಟಿದೆ.

ರಾಜ್ಯದ ಹಲವು ದೇವಾಲಯಗಳಲ್ಲಿ ಹಲವು ಭಕ್ತರು ಬರುತ್ತಿದ್ದು ದೇವಸ್ಥಾನಕ್ಕೆ ಉತ್ತಮ ಆದಾಯವಿರುತ್ತದೆ. ಇವುಗಳು ಮುಜರಾಯಿ ಇಲಾಖೆಗೆ ಸೇರಿರುವುದಿಲ್ಲ. ಸುಳವಾಡಿ ದೇವಸ್ಥಾನದ ಪ್ರಕರಣದಲ್ಲಿ ಚಾಮರಾಜನಗರ ಜಿಲ್ಲಾಡಳಿತ ದೇವಸ್ಥಾನದ ವ್ಯವಹಾರಗಳಿಂದ ದೂರವುಳಿಯಲು ನೋಡುತ್ತಿದೆ.

ಗೋಪುರ ನಿರ್ಮಾಣ ವಿಷಯದಲ್ಲಿ ಸುಳವಾಡಿಯ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದಲ್ಲಿ ಟ್ರಸ್ಟಿಗಳ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು. ದೇವಸ್ಥಾನಕ್ಕೆ ವರ್ಷದಲ್ಲಿ ಸುಮಾರು 1.5 ಕೋಟಿ ರೂಪಾಯಿ ಆದಾಯವಿದ್ದು ಅದರ ಮೇಲೆ ಇಲ್ಲಿನ ಆಡಳಿತ ಮಂಡಳಿಗೆ ಕಣ್ಣಿತ್ತು ಎನ್ನಲಾಗುತ್ತಿದೆ.

ಚಾಮರಾಜನಗರ ಜಿಲ್ಲಾಡಳಿತ ಇದೀಗ ದೇವಸ್ಥಾನದ ಆಡಳಿತ ಕಾರ್ಯವೈಖರಿ ಮತ್ತು ಅಲ್ಲಿನ ಒಳಜಗಳದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಜಿಲ್ಲೆಯಲ್ಲಿರುವ ಮುಜರಾಯಿ ಇಲಾಖೆಗೆ ಸೇರಿರದ ದೇವಸ್ಥಾನಗಳಲ್ಲಿನ ಆದಾಯದ ಬಗ್ಗೆ ಮಾಹಿತಿ ಕಲೆ ಹಾಕುವಂತೆ ತಹಸಿಲ್ದಾರರಿಗೆ ಜಿಲ್ಲಾಧಿಕಾರಿ ಬಿ ಬಿ ಕಾವೇರಿ ಸೂಚಿಸಿದ್ದಾರೆ.

ಚಿಕ್ಕಲೂರಿನ ದೇವಸ್ಥಾನದ ಆದಾಯದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಗಮನ ನೀಡುತ್ತಿದ್ದಾರೆ. ಜಿಲ್ಲೆಯ ಕುರುಬನ ಕಟ್ಟೆ, ದೊಡ್ಡಮ್ಮತೇಯ, ಮಾರಿಯಮ್ಮ, ಕನ್ನಿಕಾಪರಮೇಶ್ವರಿ, ಮಾರಡಿ ಗುಡ್ಡ, ಮುಳ್ಳಯ್ಯನ ಗಿರಿ ಬೆಟ್ಟದ ಗಣೇಶ ದೇವಸ್ಥಾನ ಮತ್ತು ಇನ್ನೂ ಕೆಲವು ದೇವಾಲಯಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿರಿಸಿದ್ದಾರೆ.

ಈ ಮಧ್ಯೆ ಸಚಿವ ರಾಜಶೇಖರ ಪಾಟೀಲ ಇಂದು ಸುಳವಾಡಿಯ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ದೇವಸ್ಥಾನವನ್ನು ತನ್ನ ಆಡಳಿತ ವಶಕ್ಕೆ ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಭಕ್ತರ ಸಾವಿಗೆ ಸಂಬಂಧಪಟ್ಟಂತೆ ಪೊಲೀಸರು ಇದುವರೆಗೆ ಸಲ್ಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

SCROLL FOR NEXT