ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್ ಬಳಿ ದಾಖಲೆ ಇಲ್ಲದ 25.76 ಲಕ್ಷ ರೂ ಹಣದ ಪತ್ತೆ ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲಾಗಿದ್ದು, ಈ ಪ್ರಕರಣದಲ್ಲಿ ಮತ್ತೊಬ್ಬ ಸಚಿವರ ಆಪ್ತ ಸಹಾಯಕರ ಹೆಸರನ್ನು ತನಿಖಾ ಧಿಕಾರಿಗಳ ಮುಂದೆ ಮೋಹನ್ ಬಾಯ್ಬಿಟ್ಟಿದ್ದಾನೆ.
ಕಾರ್ಮಿಕ ಸಚಿವ ವೆಂಕಟರಮಣ್ಣಪ್ಪ ಅವರ ಆಪ್ತ ಸಹಾಯಕ ಕೃಷ್ಣಮೂರ್ತಿ ಹಾಗೂ ವಿಧಾನಸೌಧದಲ್ಲಿಯೇ ಕಾರ್ಯನಿರ್ವಹಿಸುವ ಇನ್ನಿಬ್ಬರು ಅಧಿಕಾರಿಗಳ ಹೆಸರನ್ನು ಮೋಹನ್ ಹೇಳಿದ್ದು, ಸ್ಪಷ್ಟೀಕರಣ ಪಡೆಯಲು ಕೃಷ್ಣಮೂರ್ತಿ ಹಾಗೂ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ವಿಧಾನ ಸೌಧ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೋಹನ್ ಗುತ್ತಿಗೆ ಆಧಾರದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದು,ಅಷ್ಟು ಹಣ ಎಲ್ಲಿಂದು ಬಂತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮೋಹನ್ ಹೇಳಿದ ಮೂವರು ಗುತ್ತಿಗೆದಾರರಿಗೂ ನೋಟಿಸ್ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.