ಚಾಮರಾಜನಗರ: ಚಾಮರಾಜನಗರದ ಸುಳ್ವಾಡಿ ಕಿಚ್ಚುಗತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 6 ಮಂದಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಮಿಶ್ರಿತ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಸ್ವಸ್ಥಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದವರ ಪೈಕಿ ಈಗ ಮತ್ತೆ 6 ಮಂದಿ ಆಸ್ಪತ್ರೆಗೆ ಮರಳಿ ದಾಖಲಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೊಕಿನ ಎಂ.ಜಿ.ದೊಡ್ಡಿ ಗ್ರಾಮದ ಮಲ್ಲಿಗೆ, ರೇಖಾ, ಪಳನಿಯಮ್ಮ, ವೀರಮ್ಮ, ಕಮಲ ಹಾಗು ಪಳನಿಯಮ್ಮ ಎಂಬುವವರಿಗೆ ಹೊಟ್ಟೆ ಉರಿ ಕಾಣಿಸಿಕೊಂಡಿದ್ದು, ಇದೇ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ಇವರನ್ನೆಲ್ಲ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ಗೋಪುರ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದ ವೇಲೆ ಭಕ್ತರಿಗೆ ನೀಡಲಾಗಿದ್ದ ಪ್ರಸಾದದಲ್ಲಿ ವಿಷ ಬೆರೆಸಿದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ನೂರಾರು ಮಂದಿ ಅಸ್ವಸ್ಥರಾಗಿದ್ದರು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರೂ, ಮತ್ತೆ ಪದೇ ಪದೇ ಇವರ ಪೈಕಿ ಹಲವರಲ್ಲಿ ಪದೇ ಪದೇ ಹೊಟ್ಟೆ ನೋವು, ಉರಿ ಕಾಣಿಸಿಕೊಳ್ಳುತ್ತಿದ್ದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.