ರಾಜ್ಯ

ಸಮ್ಮಿಶ್ರ ಸರ್ಕಾರ ಗಡಗಡ: ಬೆಂಬಲ ಹಿಂಪಡೆದ ಇಬ್ಬರು ಶಾಸಕರು!

Srinivas Rao BV
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದ್ದು, ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ. 
ಮಾಜಿ ಅರಣ್ಯ ಸಚಿವ ಆರ್ ಶಂಕರ್, ಹಾಗೂ ಮುಳಬಾಗಿಲು ಪಕ್ಷೇತರ ಶಾಸಕ ಹೆಚ್ ನಾಗೇಶ್ ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯಪಾಲರನ್ನು ಭೇಟಿ ಮಾಡುವುದಕ್ಕೆ ಸಮಯವನ್ನೂ ಕೇಳಿದ್ದಾರೆ. 
ಬೆಂಬಲ ವಾಪಸ್ ಪಡೆಯುವುದರ ಬಗ್ಗೆ ಮಾತನಾಡಿರುವ ಮಾಜಿ ಅರಣ್ಯ ಸಚಿವ ಆರ್ ಶಂಕರ್, ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರಿಗೆ ಗೌರವ ಇಲ್ಲ. ಸರ್ಕಾರದ ಕಾರ್ಯವೈಖರಿಯಿಂದ ಬೇಸರವಾಗಿದೆ. ನಮಗೆ ನೋವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. 
ಇದೇ ವೇಳೆ ಮಾತನಾಡಿರುವ ಮುಳಬಾಗಿಲು ಶಾಸಕ ಹೆಚ್ ನಾಗೇಶ್ ಉತ್ತಮ ಆಡಳಿತಕ್ಕಾಗಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದೆ ಆದರೆ ಈ ಸರ್ಕಾರ ಉತ್ತಮ ಆಡಳಿತ ನೀಡುತ್ತಿಲ್ಲ. ಜನರ ಆಶಯ ಈಡೇರಿಸುವಲ್ಲಿ ಸರ್ಕಾರ ವಿಫಲಗೊಂಡಿದೆ. ಸರ್ಕಾರದಿಂದ ನಮಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ.  ಹೀಗಾಗಿ ನಾನು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದು ಬಿಜೆಪಿಗೆ ಬೆಂಬಲ ನೀಡುತ್ತೇನೆ, ಬೆಂಬಲ ಹಿಂಪಡೆಯುವಂತೆ ಯಾರೂ ಒತ್ತಡ ಹಾಕಿಲ್ಲ ಎಂದು ನಾಗೇಶ್ ತಿಳಿಸಿದ್ದಾರೆ. 
SCROLL FOR NEXT