ಬೆಂಗಳೂರು: ಬಡ ಮಕ್ಕಳಿಗಾಗಿ ಸರ್ಕಾರಿ ಶಾಲೆಗಳನ್ನು ಆರಂಭಿಸಿದ್ದ ಸರ್ಕಾರ, ಅವುಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಸಾಕಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಗಬ್ಬು ನಾರುತ್ತಿದ್ದು, ಶೌಚಾಲಯಗಳ ನಿರ್ವಹಣೆಗೆ ಮಕ್ಕಳು ಹಾಗೂ ಶಿಕ್ಷಕರು ಮುಂದಾಗಿದ್ದು ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ.
ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಂಡಿರುವ ಸರ್ಕಾರ ಇದೀಗ ಶಾಲೆಗಳಲ್ಲಿ ಶುಚಿತ್ವ ಕಾಪಾಡುವ ಸಲುವಾಗಿ ಶಾಲಾ ರಕ್ಷಕರನ್ನು ನೇಮಕ ಮಾಡಲು ಮುಂದಾಗಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಜೂನ್ ತಿಂಗಳಿನಿಂದ ಆರಂಭವಾಗಲಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಶಾಲಾ ರಕ್ಷಣಕನ್ನು ನೇಮಕ ಮಾಡಿಕೊಂಡು, ಶಾಲೆಗಳಲ್ಲಿ ಶುಚಿತ್ವ ಕಾಪಾಡಲು ಮುಂದಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ ಯಾವುದೇ ರೀತಿಯ ನೇಮಕಾತಿಗಳನ್ನು ಮಾಡಿಕೊಂಡಿರಲಿಲ್ಲ. ಹೀಗಾಗಿ ಸೂಕ್ತ ನಿರ್ವಹಣೆಗಳಿಲ್ಲದೆ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ. ಕೆಲ ಶಾಲೆಗಳಲ್ಲಿ ಶೌಚಾಲಯಗಳನ್ನು ಶುಚಿಗೊಳಿಸಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೇ ಮುಂದಾಗಿರುವುದು ಸಾಕಷ್ಟು ವಿರೋಧ ಹಾಗೂ ಟೀಕೆಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ ಶುಚಿತ್ವ ಕಾಪಾಡಲು ಶಾಲಾ ರಕ್ಷಕರನ್ನು ನಿಯೋಜಿಸಲು ಮುಂದಾಗಿದೆ.
ನೇಮಕಗೊಳ್ಳುವ ಶಾಲಾ ರಕ್ಷಕರು ನಿಯೋಜನೆಗೊಂಡಿರುವ ಪ್ರತೀ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶೌಚಾಲಯಗಳನ್ನು ಶುಚಿಗೊಳಿಸಬೇಕು. ಎಲ್ಲಾ ಶಾಲೆಗಳಲ್ಲೂ ಬೆಳಿಗ್ಗೆಯೇ ಶೌಚಾಲಯಗಳನ್ನು ಶುಚಿಗೊಳಿಸುವುದು ಕಷ್ಟಕರವಾಗಿರುತ್ತದೆ. ಶಾಲಾ ರಕ್ಷಕರು ಸಂಜೆ ವೇಳೆಯೂ ಶಾಲೆಗಳಿಗೆ ಭೇಟಿ ನೀಡಿ ಶೌಚಾಲಯಗಳನ್ನು ಶುಚಿಗೊಳಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶಾಲೆಗಳಿಗೆ ಭೇಟಿ ನೀಡುವ ರಕ್ಷಕರಿಗೆ ಸರ್ಕಾರದ ವತಿಯಿಂದಲ್ ವಾಹನವನ್ನೂ ನೀಡಲಾಗುತ್ತದೆ. ಈ ಕುರಿತು ಶೀಘ್ರದಲ್ಲಿಯೇ ಗುತ್ತಿಗೆ ಕರೆಯಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos