ರಾಜ್ಯ

ಚಿಂತಾಮಣಿ ದೇಗುಲ ಪ್ರಸಾದಕ್ಕೆ ವಿಷ ಪ್ರಕರಣ: ಮತ್ತೊಬ್ಬ ಆರೋಪಿ ವಶಕ್ಕೆ

Manjula VN
ಚಿಕ್ಕಬಳ್ಳಾಪುರ: ದೇವಾಲಯದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿರುವ ಶ್ರೀ ಗೌರಿ ಪತಿ ಲೋಕೇಶ್ ಎಂಬುವವರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಚಿಂತಾಮಣಿಯ ಗಂಗಮ್ಮ ದೇಗುಲದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಸಿದಂತೆ ಲೋಕೇಶ್ ಅವರನ್ನು ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆಗಾಗಿ ಚಿಂತಾಮಣಿಗೆ ಕರೆತರಲಾಗಿದೆ ಎಂದು ವರದಿಗಳು ತಿಳಿಸಿವೆ. 
ಕೆಲ ದಿನಗಳ ಹಿಂದಷ್ಟೇ ಚಿಕ್ಕಬಳ್ಳಾಪುರದ ಚಿಂತಾಮಣಿ ನಾರಸಿಂಹಪೇಟೆಯ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ವಿತರಿಸಲಾಗಿತ್ತು. ಪ್ರಸಾದ ಸ್ವೀಕರಿಸಿದ್ದ ಇಬ್ಬರು ಭಕ್ತರು ಸಾವನ್ನಪ್ಪಿದ್ದರು. ಅಲ್ಲದೆ 9 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. 
ಪ್ರಕರಣ ಸಂಬಂಧ ಪೊಲೀಸರು ವಿಷ ಪ್ರಸಾದ ತಯಾರಕಿ ಚಿಂತಾಮಣಿ ಸಾಲಿಪೇಟೆಯ ಲಕ್ಷ್ಮೀ, ಈಕೆಯ ಮನೆಕೆಲಸದಾಳು ಅಮರಾವತಿ  ಮತ್ತು ಹೂವು ಮಾರುವ ಪಾರ್ವತಮ್ಮ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ. 
ಆರೋಪಿ ಲಕ್ಷ್ಮೀ ಪ್ರಿಯಕರ ಲೋಕೇಶ್ ನನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ದುಷ್ಕೃತ್ಯಕ್ಕೆ ಕಾರಣ ಪ್ರಿಯಕರನ ಸಂಬಂಧಕ್ಕೆ ಅಡ್ಡಿಯಾಗಿರುವ ಆತನ ಪತ್ನಿ ಗೌರಿಯನ್ನು ಕೊಲ್ಲುವುದೇ ಆಗಿತ್ತು ಎಂದು ಮೂಲಗಳು ತಿಳಿಸಿವೆ. 
ದೇವಾಲಯದ ಭಕ್ತರಿಗೆಲ್ಲರಿಗೂ ಪ್ರಸಾದ ಹಂಚುವ ವೇಳೆ ಗೌರಿಗೆ ಮಾತ್ರ ವಿಷ ಪ್ರಸಾದ ನೀಡಲು ಆರೋಪಿಗಳು ಯೋಜನೆ ರೂಪಿಸಿದ್ದರು. ಇತರ ಜನರನ್ನು ಹೊರತುಪಡಿಸಿ ಗೌರಿ ಒಬ್ಬಳಿಗೆ ಸಮಸ್ಯೆಯಾದರೆ, ಯಾರಿಗೂ ಅನುಮಾನ ಬರುವುದಿಲ್ಲ ಎಂದು ಆರೋಪಿಗಳು ಆಲೋಚಿಸಿದ್ದರು. ಆದರೆ, ಅಮರಾವತಿ ದೇಗುಲದಲ್ಲಿ ವಿಷ ಪ್ರಸಾದವನ್ನು ಗೊಂದಲದಲ್ಲಿ ಕೆಲ ಲೋಟಗಳಿಗೂ ಹಾಕಿದ್ದಾಳೆ. ಇದರಿಂದ ಇತರರು ವಿಷ ಸೇವಿಸುವಂತಾಗಿತ್ತು ಎಂದು ಹೇಳಲಾಗುತ್ತಿದೆ. 
SCROLL FOR NEXT