ಬೆಂಗಳೂರು: ಮಗು ಹೊಂದಿದರೆ ಮಾತ್ರ ಬೆಂಗಳೂರಿನ ಪ್ರಮುಖ ಪ್ರದೇಶವಾದ ಜಯನಗರದಲ್ಲಿ ವಾಣಿಜ್ಯ ಕೇಂದ್ರವೊಂದನ್ನು ನಿನ್ನ ಹೆಸರಿಗೆ ದಾಖಲು ಮಾಡಿ ಕೊಡುತ್ತೇನೆ ಎಂದು ತಂದೆ ಹೇಳಿರುವುದು ಮಗಳ ಜೀವನಕ್ಕೇ ಕುತ್ತು ತಂದ ಪ್ರಕರಣ ನಡೆದಿದೆ.
2010ರಲ್ಲಿ ಮದುವೆಯಾದ ಮಹಿಳೆಗೆ ಮತ್ತು ಆಕೆಯ ಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ನೊಂದ ಪತಿ ಆಸ್ತಿ ಪಡೆಯಬೇಕೆಂಬ ಹಠದಿಂದ ಪತ್ನಿಯನ್ನು ಬೇರೊಬ್ಬ ಪುರುಷನ ಜೊತೆ ಮಲಗುವಂತೆ ಪೀಡಿಸಿದ್ದಾನೆ.
ಬೆಂಗಳೂರು ದಕ್ಷಿಣ ಭಾಗದಲ್ಲಿರುವ ನಿವಾಸಿ ಮಾನಸ(ಹೆಸರು ಬದಲಾಯಿಸಲಾಗಿದೆ) ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ತನ್ನ ಪತಿ ರೋಹಿತ್(ಹೆಸರು ಬದಲಿಸಲಾಗಿದೆ) ಮತ್ತು ಅತ್ತೆ ಮಾವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಮದುವೆಯಾಗುವಾಗ ಮಾನಸ ಪೋಷಕರು ರೋಹಿತ್ ಗೆ 10 ಕೋಟಿ ಬೆಲೆಬಾಳುವ ಚಿನ್ನ, 150 ಕೆಜಿ ಬೆಳ್ಳಿ, ಬಿಎಂಡಬ್ಲ್ಯು ಕಾರು ಮತ್ತು ಇತರ ಮೌಲ್ಯಯುತ ವಸ್ತುಗಳನ್ನು ವರದಕ್ಷಿಣೆಯಾಗಿ ಕೊಟ್ಟಿದ್ದರು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ 50 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು.
ಮದುವೆಯಾದ ಕೆಲ ತಿಂಗಳಲ್ಲಿಯೇ ರೋಹಿತ್, ಆತನ ಪೋಷಕರು ಮತ್ತು ಕಿರಿಯ ಸಹೋದರಿ ಸಣ್ಣಪುಟ್ಟ ವಿಷಯಕ್ಕೆ ಮತ್ತು ಹೆಚ್ಚು ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದರು. ಆಕೆಯ ಪೋಷಕರು ಪ್ರತಿವರ್ಷ 1 ಕೋಟಿ ರೂಪಾಯಿ ನೀಡುವುದಾಗಿ ಒಪ್ಪಿಕೊಂಡರು. ಅದು ಅವರಿಗೆ ಜಯನಗರದಲ್ಲಿರುವ ವಾಣಿಜ್ಯ ಕೇಂದ್ರದಿಂದ ಬಂದ ಬಾಡಿಗೆಯಿಂದ. ಮಗು ಹೊಂದಿದರೆ ಮಗುವಿನ ಹೆಸರಲ್ಲಿ ಬಿಲ್ಡಿಂಗ್ ನ್ನು ರಿಜಿಸ್ಟ್ರೇಷನ್ ಮಾಡಿಸಿಕೊಡುವುದಾಗಿ ಹೇಳಿದ್ದರು.
ರೋಹಿತ್ ಮತ್ತು ಆತನ ಪೋಷಕರಿಗೆ ಜಯನಗರದಲ್ಲಿರುವ ಬಿಲ್ಡಿಂಗ್ ಮೇಲೆ ಕಣ್ಣಿತ್ತು. ರೋಹಿತ್ ಗೆ ಕೆಲವು ಲೈಂಗಿಕ ಸಮಸ್ಯೆಗಳಿದ್ದವು. ಹೀಗಾಗಿ ದಂಪತಿಗೆ ಮಕ್ಕಳಾಗಲಿಲ್ಲ. ಮಕ್ಕಳಾಗಲೆಂದು ಬೇರೊಬ್ಬ ಪುರುಷನ ಜೊತೆ ಸಂಪರ್ಕ ಹೊಂದುವಂತೆ ರೋಹಿತ್ ಮತ್ತು ಆತನ ಪೋಷಕರು ನಿರಂತರವಾಗಿ ಮಾನಸಗೆ ಪೀಡಿಸಲಾರಂಭಿಸಿದರು. ಅಷ್ಟೇ ಅಲ್ಲ ಇದೇ ವಿಷಯಕ್ಕೆ ಆಕೆಗೆ ಪ್ರತಿದಿನ ಹಲ್ಲೆ ಮಾಡಲಾರಂಭಿಸಿದರು.
ರೋಹಿತ್ ನ ಸೋದರಿಗೆ ಹೈದರಾಬಾದಿನ ಉದ್ಯಮಿ ಜೊತೆ ಮದುವೆಯಾದ ನಂತರ ಆತನ ಜೊತೆ ಸಂಪರ್ಕ ಹೊಂದುವಂತೆ ರೋಹಿತ್ ಪೀಡಿಸಲಾರಂಭಿಸಿದ. ಬಾ ಮೈದ ಬೆಂಗಳೂರಿಗೆ ಬಂದಾಗಲೆಲ್ಲ ಆಕೆ ಆತನ ಜೊತೆ ಮಲಗುವಂತೆ ಮನೆಯವರೆಲ್ಲಾ ಪೀಡಿಸುತ್ತಿದ್ದರು. ಮಾನಸ ನಿರಾಕರಿಸಿದಾಗ ಹೊಡೆದು, ಬಡಿದು ಮಾಡುತ್ತಿದ್ದರು. ವಿದೇಶಕ್ಕೆ ಪ್ರವಾಸ ಹೋದಾಗಲೂ ಇದು ಮುಂದುವರಿಯುತ್ತಿತ್ತು.
ಮುಂಬೈಯಲ್ಲಿ ಪೋಷಕರ ಸಂಬಂಧಿಕರ ಮದುವೆಗೆ ಹೋಗಿದ್ದ ವೇಳೆ ರೋಹಿತ್ ಮಾನಸ ಮೇಲೆ ಇದೇ ವಿಷಯಕ್ಕೆ ಹಲ್ಲೆ ಮಾಡಿದ್ದ. ಪೋಷಕರಿಗೆ ಈ ವಿಷಯ ಗೊತ್ತಾಗಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದರು.
ರೋಹಿತ್ ಮತ್ತು ಆತನ ಪೋಷಕರ ವಿರುದ್ಧ ಪೊಲೀಸರು ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ ಮತ್ತು ರೋಹಿತ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕೊಲೆ ಯತ್ನ ಕೇಸು ದಾಖಲಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos