ವೀರ ಯೋಧರ ಸ್ಮರಣಾರ್ಥ ತಲೆ ಎತ್ತಿದ 'ಸೈನಿಕ ಪಾರ್ಕ್'
ಶಿವಮೊಗ್ಗ: ದೇಶಾದ್ಯಂತ ಇಂದು 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದ್ದು, ಇದೇ ವೇಳೆ ಶಿವಮೊಗ್ಗದಲ್ಲಿ ಕಾರ್ಗಿಲ್ ವೀರ ಯೋಧರ ಸ್ಮರಣಾರ್ಥ ವಿಶೇಷ 'ಸೈನಿಕ ಪಾರ್ಕ್' ನಿರ್ಮಾಣ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಮಧ್ಯ ಭಾಗದ ಪಾರ್ಕ್ ಈಗ ಸೈನಿಕ ಪಾರ್ಕ್ ಆಗಿ ಹೊಸ ರೂಪ ಪಡೆದುಕೊಂಡಿದೆ. ಜಿಲ್ಲಾಡಳಿತ, ಸೈನಿಕ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಶಿಲ್ಪಕಲಾ ಅಕಾಡೆಮಿ ಒಗ್ಗೂಡಿಕೊಂಡು ನಗರದ ಸರಕಾರಿ ನೌಕರರ ಭವನದ ಎಡ ಬದಿ, ಜಿಲ್ಲಾಧಿಕಾರಿ ನಿವಾಸ ಸಮೀಪವಿರುವ ಉದ್ಯಾನವನಕ್ಕೆ ಹೊಸ ಜೀವ ತಂಬಿದ್ದಾರೆ. ದೇಶ ಕಾಯುವ ಸೈನಿಕರ ತ್ಯಾಗ, ಬಲಿದಾನ, ದೇಶ ಪ್ರೇಮ ಬಿಂಬಿಸುವ ಹಲವು ಕಲಾಕೃತಿಗಳನ್ನು ಇಲ್ಲಿ ಸಿದ್ಧಪಡಿಸಲಾಗಿದ್ದು, ಈ ವಿಶೇಷ ಪಾರ್ಕ್ ಇಂದು ಲೋಕಾರ್ಪಣೆಯಾಗಲಿದೆ.
ಈ ವಿಶೇಷ ಸೈನಿಕ ಪಾರ್ಕ್ ನಲ್ಲಿ ವಾಯುಸೇನೆ, ನೌಕಾಸೇನೆ, ಭೂ ಸೇನೆ ಅಧಿಕಾರಿಗಳು, ಸೈನ್ಯದ ಸಂಕೇತ ಅಮರ್ ಜವಾನ್, ಅಧಿಕಾರಿಗಳು ಸೆಲ್ಯೂಟ್ ಹೊಡೆಯುತ್ತಿರುವುದು, ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ರಕ್ಷಣೆ ಮಾಡುತ್ತಿರುವುದು, ಕಾರ್ಗಿಲ್ ಧ್ವಜಾರೋಹಣ, ನೇವಿ ಅಧಿಕಾರಿ, ಗನ್ ಮ್ಯಾನ್, ಆರ್ಮಿ ಆಫೀಸರ್, ಸೈನಿಕರಿಗೆ ಮನೆಯಿಂದ ಬೀಳ್ಕೊಡುಗೆ, ಗಾಯಗೊಂಡ ಯೋಧರ ರಕ್ಷಣೆ, ಯೋಧರಿಗೆ ಚಿಕಿತ್ಸೆ, ನಾಗರಿಕರ ರಕ್ಷಣೆ ಹಾಗೂ ಏಕತೆ ಸಾರುವ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ.
ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ದಾವಣಗೆರೆ, ರಾಯಚೂರು, ಉಡುಪಿ ಹಾಗೂ ಬೆಂಗಳೂರಿನಿಂದ ಆಗಮಿಸಿರುವ ಹಿರಿ-ಕಿರಿಯ ಕಲಾವಿದರು ಈ ಪಾರ್ಕ್ ನಲ್ಲಿನ ಕಲಾಕೃತಿಗಳನ್ನು ನಿರ್ಮಾಣ ಮಾಡಿದ್ದು, ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಕಲಾವಿದರ ಕೈ ಚಳಕದಲ್ಲಿ ಕಲಾಕೃತಿಗಳು ಅರಳಿವೆ. ಭಾರತೀಯ ಸೇನೆ ಮತ್ತು ಸೈನಿಕ ತ್ಯಾಗ ಎಂಬ ಥೀಮ್ ಅಡಿಯಲ್ಲಿ ಈ ಪಾರ್ಕ್ ನಿರ್ಮಾಣಗೊಂಡಿದೆ. ಸುಮಾರು 15 ರಿಂದ 20 ಲಕ್ಷ ರೂಗಳ ವೆಚ್ಚದಲ್ಲಿ ಸುಮಾರು 20ಕ್ಕೂ ಅಧಿಕ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ.
ಈ ವಿಶೇಷ ಸೈನಿಕ ಪಾರ್ಕ್ ಇಂದು ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತ ಲೋಕಾರ್ಪಣೆಯಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos