ಧಾರವಾಡ: ಸೋದರಿಯ ಮದುವೆಗೆ ಕಾಲೇಜಿನ ಮುಖ್ಯಸ್ಥೆ ರಜೆ ನೀಡಲಿಲ್ಲವೆಂದು ರೊಹ್ಟಕ್ ನ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಕೇಂದ್ರದಲ್ಲಿ ಎಂಡಿ ಮಾಡುತ್ತಿದ್ದ 30 ವರ್ಷದ ಕರ್ನಾಟಕ ಮೂಲದ ವೈದ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೊಹ್ಟಕ್ ಪೊಲೀಸರು ತಿಳಿಸಿದ್ದಾರೆ.
ಧಾರವಾಡದ ಓಂಕಾರ್ ಎಂಬುವವರು ತಮ್ಮ ಸೋದರಿ ಮದುವೆಗೆ ಹೋಗಲು ರಜೆ ನೀಡಲಿಲ್ಲವೆಂದು ಮೊನ್ನೆ ಗುರುವಾರ ರಾತ್ರಿ ತಾವು ಉಳಿದುಕೊಂಡಿದ್ದ ಹಾಸ್ಟೆಲ್ ನ ರೂಮ್ ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೊಹ್ಟಕ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕೈಲಾಶ್ ಚಂದರ್ ತಿಳಿಸಿದ್ದಾರೆ.
ಓಂಕಾರ್ ಅವರು ಮಕ್ಕಳ ವೈದ್ಯಶಾಸ್ತ್ರದಲ್ಲಿ ಎಂ ಡಿ ವ್ಯಾಸಂಗ ಮಾಡುತ್ತಿದ್ದರು. ಅಲ್ಲಿ ಕಾಲೇಜಿನ ವಿಭಾಗದ ಮುಖ್ಯಸ್ಥೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.
ಓಂಕಾರ್ ಅವರು ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಆದರೆ ಅವರ ಸಹೋದ್ಯೋಗಿಗಳು ಮತ್ತು ಕುಟುಂಬಸ್ಥರು ಹೇಳುವ ಪ್ರಕಾರ ವಿಭಾಗದ ಮುಖ್ಯಸ್ಥರು ಅವರಿಗೆ ತಾಳಲಾರದ ಕಿರುಕುಳ ನೀಡುತ್ತಿದ್ದರು. ಇನ್ನು ಕೆಲವೇ ದಿನಗಳಲ್ಲಿ ಅವರ ಸೋದರಿ ಮದುವೆಯಿದ್ದು ಅದಕ್ಕೆ ಪೂರ್ವಭಾವಿಯಾಗಿ ರಜೆಗೆ ಮನವಿ ಮಾಡಿದಾಗ ರಜೆ ನೀಡಲು ಆಗುವುದಿಲ್ಲವೆಂದು ನಿರಾಕರಿಸಿದರು. ಇದರಿಂದ ಓಂಕಾರ್ ತೀವ್ರ ನೊಂದಿದ್ದರು ಎಂದು ಪೊಲೀಸರು ಹೇಳುತ್ತಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಡಿ ಕಾಲೇಜಿನ ವಿಭಾಗ ಮುಖ್ಯಸ್ಥೆ ವಿರುದ್ಧ ಸೆಕ್ಷನ್ 306ರಡಿ ಕೇಸು ದಾಖಲಿಸಲಾಗಿದೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ತನಿಖೆ ಮುಂದುವರಿದಿದೆ.
ಈ ಮಧ್ಯೆ ಕಿರುಕುಳ ನೀಡುತ್ತಿದ್ದ ವೈದ್ಯೆಯನ್ನು ತಕ್ಷಣವೇ ಬಂಧಿಸಬೇಕೆಂದು ಓಂಕಾರ್ ಅವರ ಸಹೋದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos