ರಾಜ್ಯ

ಐಎಂಎ ವಂಚನೆ: ಮನ್ಸೂರ್ ಖಾನ್ ಆಸ್ತಿ ಮುಟ್ಟುಗೋಲಿಗೆ ಅನುಮತಿ ಕೋರಿ ಎಸ್‌ಐಟಿಯಿಂದ ಹೈಕೋರ್ಟ್ ಗೆ ಮೊರೆ

Raghavendra Adiga
ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಠೇವಣಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಪಿಐಡಿ ಕಾಯ್ದೆ ನಿಯಮದಡಿ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿಸುವಂತೆ ಕರ್ನಾಟಕ ಹೈಕೋರ್ಟ್ ಗೆ ಮನವಿ ಸಲ್ಲಿಸಿದೆ.ಇದರಿಂದಾಗಿ ಸಂಸ್ಥೆಯ ಮತ್ತು ಅದರ ಮಾಲೀಕರಾದ ಮೊಹಮ್ಮದ್ ಮನ್ಸೂರ್ ಖಾನ್ ಗೆ ಸೇರಿದ ಹಣ ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗಲಿದೆ. ಹೀಗೆ ಆಸ್ತಿ ಮುಟ್ಟುಗೋಲು ಹಾಕಿ ಅದನ್ನು ಹರಾಜು ಹಾಕುವ ಮೂಲಕ ಹೂಡಿಕೆದಾರರ ಹಣ ಹಿಂತಿರುಗಿಸಲು ಅನುಕೂಲವಾಗಲಿದೆ.
ಹೂಡಿಕೆದಾರರ ಹಿತದೃಷ್ಟಿಯಿಂದ ಅಸ್ತಿತ್ವದಲ್ಲಿರುವ ಐಪಿಸಿ ಕಲಂ ಗಳ ಜತೆಗೆ ಈ ಕಾಯ್ದೆಯನ್ನು ಸೇರಿಸಲು ನಿರ್ಧರಿಸಿದ್ದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ."ನಾವು ಈಗಾಗಲೇ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದೇವೆ ಮತ್ತು ಶೀಘ್ರದಲ್ಲೇ ಈ ಕ್ರಮವನ್ನು ಜಾರಿಗೊಳಿಸಲಾಗುವುದು" ಎಂದು ಅಧಿಉಕಾರಿಗಳು ಹೇಳಿದ್ದಾರೆ.
ಒಮ್ಮೆ, ನ್ಯಾಯಾಲಯವು ಅನುಮತಿ ನೀಡಿದರೆ, ಪೊಲೀಸರು ಖಾನ್ ಗೆ ಸೇರಿದ ಎಲ್ಲಾ ಸ್ಥಿರ ಹಾಗೂ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಲಲಿದ್ದಾರೆ.ಅಲ್ಲದೆ ಆತನ ಆಸ್ತಿಗಳ ಸಂಬಂಧ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಲಿದ್ದಾರೆ.ಮುಂದೆ ಕಂದಾಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ, ಅವರು ಈ ಆಸ್ತಿಗಳನ್ನು ಹರಾಜು ಹಾಕಲಿದ್ದಾರೆ.
ಹರಾಜಿನಿಂದ ಪಡೆದ ಹಣವನ್ನು ಹೂಡಿಕೆದಾರರಿಗೆ ಮರುಪಾವತಿಸಲು ಬಳಸಲಾಗುತ್ತದೆ, ಎಂದು ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ, ಎಸ್ಐಟಿ ಅಧಿಕಾರಿಗಳು ಶಿವಾಜಿನಗರದ ಮನ್ಸೂರ್ ಅವರ ನಿವಾಸ ಮತ್ತು ಅವರ ಸಂಬಂಧಿಕರ ಮನೆಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದು ಕಾರ್ಯಾಚರಣೆಯ ಸಮಯದಲ್ಲಿ ಆತನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಖಾನ್ ಈಗಾಗಲೇ ಯುಎಇಗೆ ಪಲಾಯನ ಮಾಡಿದ್ದರೂ, ಪೊಲೀಸರು ಆತನ ಚಲನ ವಲನಗಳನ್ನು ಪತ್ತೆ ಹಚ್ಚಲು  ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ, 1,500 ಕ್ಕೂ ಹೆಚ್ಚು ಹೂಡಿಕೆದಾರರು ಐಎಂಎ ಮತ್ತು ಅದರ ಸಂಸ್ಥಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ. ಇದರೊಂದಿಗೆ, ಒಟ್ಟು ದೂರುಗಳ ಸಂಖ್ಯೆ 34,800 ಕ್ಕಿಂತ ಹೆಚ್ಚಾಗಿದೆ.
SCROLL FOR NEXT