ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಐಎಂಎ ಮಾಲೀಕ ಮನ್ಸೂರ್ ಖಾನ್ಗೂ ತಮಗೂ ಯಾವುದೇ ಸಂಬಂಧವಿಲ್ಲ. ಆತನ ಕಂಪನಿಯ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ರಹ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಮನ್ಸೂರ್ ಖಾನ್ ನಿನ್ನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಅದರಲ್ಲಿ ರೆಹಮಾನ್ ಖಾನ್ ಅವರ ಹೆಸರು ಪ್ರಸ್ತಾಪಿಸಿದ್ದ. ಈ ಹಿನ್ನೆಲೆಯಲ್ಲಿ ಇಂದು ರೆಹಮಾನ್ ಖಾನ್ ಸುದ್ದಿಗೋಷ್ಠಿ ನಡೆಸಿ ಈ ಸ್ಪಷ್ಟನೆ ನೀಡಿದ್ದಾರೆ.
ನನ್ನನ್ನು ಭೇಟಿ ಮಾಡಲು ಮನ್ಸೂರ್ ಖಾನ್ನನ್ನು ಶಾಸಕ ರೋಷನ್ ಬೇಗ್ ಒಮ್ಮೆ ಕರೆತಂದಿದ್ದರು. ಅದನ್ನು ಹೊರತುಪಡಿಸಿ ನಾನು ಅವರನ್ನು ಭೇಟಿ ಮಾಡಿಲ್ಲ. ಐಎಂಎ ಮುಚ್ಚಿ ಹೋಗಿರುವುದರಿಂದ ರೆಹಮಾನ್ ಖಾನ್ ಅವರಿಗೆ ಸಂತೋಷವಾಗಿರಬಹುದು, ಅವರಿಗೆ ಧನ್ಯವಾದಗಳು ಎಂದು ವಿಡಿಯೋದಲ್ಲಿ ಮನ್ಸೂರ್ ಹೇಳಿದ್ದಾನೆ. ನಾವು ಆತನ ಕಂಪೆನಿಗೆ ಸಹಕಾರ ಮಾಡಿಲ್ಲ ಎಂಬುದನ್ನು ಆತ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾನೆ ಎಂದು ರೆಹಮಾನ್ ಖಾನ್ ಹೇಳಿದರು.
ಐಎಂಎ ವ್ಯವಹಾರಗಳ ಬಗ್ಗೆ ಮೊದಲಿನಿಂದಲೂ ತಮಗೆ ವಿರೋಧವಿತ್ತು. ತಾನೊಬ್ಬ ಚಾರ್ಟಡ್ ಅಕೌಂಟೆಂಟ್ ಆಗಿರುವುದರಿಂದ ಐಎಂಎ ವ್ಯವಹಾರಗಳ ಬಗ್ಗೆ ತಮಗೆ ಸಂಶಯವಿತ್ತು. ಆತ ಯಾವ ರೀತಿ ವ್ಯವಹಾರ ನಡೆಸುತ್ತಿದ್ದಾನೆ ಎಂಬುದು ನಮಗೆ ಮಾಹಿತಿ ಇರಲಿಲ್ಲ. ಇದೊಂದು ವಂಚಕ ಕಂಪನಿ ಎಂಬುದು 2017ರಲ್ಲಿ ರಾಜ್ಯ ಸರ್ಕಾರಕ್ಕೆ ತಿಳಿದಿತ್ತು. ಆದರೆ ಸರ್ಕಾರ ಕ್ರಮ ಕೈಗೊಳ್ಳದೆ ವಿಳಂಬ ಮಾಡಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos