ರಾಯಚೂರು: ಜಲಧಾರೆ ಯೋಜನೆಯ ಮೂಲಕ ರಾಯಚೂರು ಜಿಲ್ಲೆಗೆ ಸಮಗ್ರ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರಕಾರದ ಮುಂದಿದ್ದು ಅದಕ್ಕೆ ಶೀಘ್ರ ಅನುಮೋದನೆ ನೀಡುವ ಮೂಲಕ ಇಡೀ ಜಿಲ್ಲೆಗೆ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ನಡೆಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಯಚೂರಿನ ವಿವಿಧ ಯೋಜನೆಗಳಿಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.
ರಾಯಚೂರು ವಿಶ್ವವಿದ್ಯಾಲಯದ ಬಗ್ಗೆಯೂ ಕ್ಯಾಬಿನೆಟ್ನಲ್ಲಿ ಚರ್ಚೆ ನಡೆಸಲಾಗುವುದು. ನಾನಿಲ್ಲಿ ಕೇವಲ ಗ್ರಾಮವಾಸ್ತವ್ಯಕ್ಕಾಗಿ ಬಂದಿಲ್ಲ. ಯಾವುದೇ ಯೋಜನೆಗೆ ಹಣದ ಕೊರತೆ ಇಲ್ಲ. ಸಾಲಮನ್ನಾದಿಂದಾಗಿ ಹಣದ ಕೊರತೆಯಾಗಿಲ್ಲ. ಯಾವ ಇಲಾಖೆಯ ಹಣವನ್ನೂ ಕಡಿತ ಮಾಡಿಲ್ಲ. ನನ್ನ ವೇಗಕ್ಕೆ ಅಧಿಕಾರಿಗಳು ಬರಬೇಕು. ನೀರಾವರಿ ಇಲಾಖೆಗೆ 19 ಸಾವಿರ ಕೋಟಿ ರೂಪಾಯಿ ನೀಡಿದ್ದೇನೆ. ರಾಜ್ಯದ ಆರೂವರೆ ಕೋಟಿ ಜನ ನನಗೆ ಅಣ್ಣತಮ್ಮಂದಿರು ಎಂದು ಹೇಳಿದ್ದಾರೆ.
ಗ್ರಾಮವಾಸ್ತವ್ಯಕ್ಕೆ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿರುವುದು ನಿಜ. ಈ ಶೌಚಾಲಯದಿಂದ ಮುಂದೆ ಮಕ್ಕಳಿಗೆ ಅನುಕೂಲ ಆಗುತ್ತದೆ. ನನಗಾಗಿ ಮಲಗಲು ಮಂಚವೂ ಬೇಡ ಎಂದಿದ್ದೇನೆ. ವಾಸ್ತವ್ಯಕ್ಕೆ ಒಂದು ಹಾಸಿಗೆ ಸಾಕು ಎಂದಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಇಂದೋ ನಾಳೆಯೋ ಬಿದ್ದು ಹೋಗುವುದಿಲ್ಲ. ಸರ್ಕಾರದಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುತ್ತದೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ. ಕೇವಲ ಬೆಂಗಳೂರು ಮಾತ್ರವಲ್ಲ, ಎಲ್ಲ ಜಿಲ್ಲೆಗಳಲ್ಲೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ. ನೀರಿನ ಲಭ್ಯತೆ ಮೇಲೆ ಕೆಲಸ ಆಗುತ್ತದೆ. ಮೈತ್ರಿ ಸರ್ಕಾರ ತೆಗೆದುಕೊಂಡ ನಿರ್ಣಯ, ಯೋಜನೆಗಳು ಜನರಿಗೆ ಗೊತ್ತಾಗಲು ಐದಾರು ತಿಂಗಳು ಬೇಕಾಗಿದೆ. ಶಿಕಾರಿಪುರಕ್ಕೆ ನೀರಾವರಿಗೆ 500 ಕೋಟಿ ರೂ. ಕೊಟ್ಟಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಮೂಡದ ಹಿನ್ನೆಲೆಯಲ್ಲಿ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಮೊರೆ ಹೋಗಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಭಾಗದಲ್ಲಿ ತಮ್ಮ ಕಾರ್ಯಕ್ರಮದ ಮೂಲಕ ಜನತೆಯ ಕಷ್ಟ-ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ಒದಗಿಸಲು ಮುಂದಾಗಿದ್ದಾರೆ.