ಬೆಂಗಳೂರು: ಪ್ರಯಾಣಿಕರಿಂದ ಮೀಟರ್ ಗಿಂತ ಹೆಚ್ಚು ಹಣ ವಸೂಲಿ ಸೇರಿ ಸಂಚಾರ ನಿಯಮ ಉಲ್ಲಂಘಿಸುವ ಆಟೋಗಳ ವಿರುದ್ಧ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿ 389 ಆಟೋಗಳನ್ನು ವಶಪಡಿಸಿಕೊಂಡು 2384 ಪ್ರಕರಣ ದಾಖಲಿಸಿದ್ದಾರೆ.
ಪಶ್ಚಿಮ ವಿಭಾಗದ ಉಪ್ಪಾರಪೇಟೆ, ಚಿಕ್ಕಪೇಟೆ, ಸಿಟಿಮಾರುಕಟ್ಟೆ, ಮಾಗಡಿ ರಸ್ತೆ, ಕೆಂಗೇರಿ, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ಬಸವನಗುಡಿ, ಜಯನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿ 18 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಬೆಳಿಗ್ಗೆ 7 ರಿಂದ 9ರವರೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ರಾಜಾಜಿನಗರದಲ್ಲಿ 239ಕ್ಕಿಂತ ಹೆಚ್ಚು, ಸಿಟಿ ಮಾರುಕಟ್ಟೆಯಲ್ಲಿ 200, ಕಾಮಾಕ್ಷಿಪಾಳ್ಯದಲ್ಲಿ 194, ವಿವಿಪುರಂನಲ್ಲಿ 181, ಮಾಗಡಿ ರಸ್ತೆಯಲ್ಲಿ 142 ಹಾಗೂ ಜಾಲಹಳ್ಳಿಯಲ್ಲಿ 134, ಕುಮಾರಸ್ವಾಮಿ ಲೇಔಟ್ನಲ್ಲಿ 120 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.
ಕಾಮಾಕ್ಷಿಪಾಳ್ಯದಲ್ಲಿ ಆಟೋಗಳಲ್ಲಿ ಮೀಟರ್ ಸರಿಯಾಗಿ ಪ್ರದರ್ಶಿಸದ 40, ಬ್ಯಾಟರಾಯನಪುರದಲ್ಲಿ 30, ಜಯನಗರದಲ್ಲಿ 33, ಕೆಂಗೇರಿಯಲ್ಲಿ 23 ಸೇರಿ 364 ಪ್ರಕರಣಗಳನ್ನು ದಾಖಲಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 389 ಆಟೋಗಳಿಗೆ ದಂಡ ವಿಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಯಾಣಿಕರು ಕರೆದ ಸ್ಥಳಕ್ಕೆ ಹೋಗದಿರುವುದು, ಸರಿಯಾಗಿ ಮೀಟರ್ ಪ್ರದರ್ಶಿಸದಿರುವುದು, ಮೀಟರ್ಗಿಂತ ಅಧಿಕ ಹಣ ಕೇಳುವುದೂ ಸೇರಿದಂತೆ ಆಟೋಗಳ ವಿರುದ್ಧ ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದರು.
ಮುಂಜಾನೆ ಹಾಗೂ ರಾತ್ರಿ ಆಟೋಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos