ರಾಜ್ಯ

ಬೆಂಗಳೂರಿಗೆ ಶರಾವತಿ ನೀರು: ಸರ್ಕಾರದ ತೀರ್ಮಾನಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ವಿರೋಧ

Raghavendra Adiga
ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ತರುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು  ಶಿವಮೊಗ್ಗ ಜಿಲ್ಲೆಯ ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು (ಬಿಜೆಪಿ ಮತ್ತು ಜೆಡಿಎಸ್) ಮತ್ತು ಸಾರ್ವಜನಿಕರು ಬಲವಾಗಿ ವಿರೋಧಿಸಿದ್ದಾರೆ. ಶರಾವತಿ ನದಿ ಉಳಿಸಿ ಹೋರಾಟದ ಒಕ್ಕೂಟ ಜುಲೈ 10 ರಂದು ಜಿಲ್ಲಾ ಬಂದ್ ಗೆ ಕರೆ ನೀಡಿದ್ದಾರೆ. ಸಾಗರ, ಹೊಸನಗರ ತಾಲೂಕಿನಲ್ಲಿ ಜನರು ಶರಾವತಿಗಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ.  ಕರಪತ್ರಗಳು ಮತ್ತು ಬ್ಯಾಡ್ಜ್‌ಗಳನ್ನು ವಿತರಿಸುವ ಮೂಲಕ ಹಲವಾರು ವೇದಿಕೆಗಳು ಯೋಜನೆಯ ವಿರುದ್ಧ ಜಾಗೃತಿ ಮೂಡಿಸುತ್ತಿವೆ.
"ಸಾಗರ ಹಾಗೂ ಹೊಸನಗರ ತಾಲ್ಲೂಕುಗಳ ನಿವಾಸಿಗಳು 1950 ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯದ ನಿರ್ಮಾಣಕ್ಕಾಗಿ ತಮ್ಮ ಮನೆ, ಭೂಮಿಯನ್ನು ತ್ಯಾಗ ಮಾಡಿದ್ದಾರೆ. ಅದರ ನಂತರ ರಾಜ್ಯದ ಯಾವುದೇ ಸರ್ಕಾರ ಗ್ರಾಮಸ್ಥರ ಪುನರ್ವಸತಿಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಅವರನ್ನು ಅರಣ್ಯದ ಅಂಚಿನಲ್ಲಿರಿಸಲಾಗಿದೆ. ಅಲ್ಲದೆ ವರ್ಷಗಳ ನಂತರ , ಗ್ರಾಮಸ್ಥರನ್ನು ಸ್ಥಳಾಂತರಿಸಿದ ಅರಣ್ಯ ಇಲಾಖೆ ಅರಣ್ಯ ಭಾಗವನ್ನು ಮೀಸಲು ಅರಣ್ಯ ಪ್ರದೇಶವಾಗಿ ಪರಿವರ್ತಿಸಿತು.  ”ಎಂದು ಸಾಹಿತಿ ನಾ ಡಿಸೋಜ ಹೇಳಿದರು. ಈ ಗ್ರಾಮಸ್ಥರು, ನಂತರ ತಮ್ಮ ಜೀವನೋಪಾಯಕ್ಕಾಗಿ, ಕೃಷಿ ಚಟುವಟಿಕೆಗಳಿಗಾಗಿ ಮರಗಳನ್ನು ಕಡಿದಿದ್ದರು ಮತ್ತು ಅವರನ್ನು ಬಗರ್ ಹುಕುಂ  ಕೃಷಿಕರು ಎಂದು ಹೆಸರಿಸಲಾಯಿತು. ಆದರೆ, ಅವರು ವಾಸಿಸುತ್ತಿರುವ ಭೂಮಿಗೆ ಅವರಿಗಿನ್ನೂ ಹಕ್ಕು ಪತ್ರ ಸಿಕ್ಕಿಲ್ಲ. ಎಂದು ಪರಿಸರವಾದಿ ಶಶಿ ಸಂಪಳ್ಳಿ ಹೇಳಿದ್ದಾರೆ.  ಶರಾವತಿಯನ್ನು ತಮ್ಮ ಜೀವಸೆಲೆ ಮತ್ತು ಅವರ ಸಂಸ್ಕೃತಿಯ ಒಂದು ಭಾಗವೆಂದು ಪರಿಗಣಿಸುವ ಮಲೆನಾಡಿಗರಿಗೆ ಸರ್ಕಾರದ ಈ ಕ್ರಮ ದೊಡ್ಡ ಹೊಡೆತವಾಗಿದೆ.
ನಿವೃತ್ತ ಅಧೀಕ್ಷಕ ಎಂಜಿನಿಯರ್ ಗಜಾನನ  ಶರ್ಮಾ ಮಾತನಾಡಿ, “ಈ ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಕಾಯ್ದಿರಿಸಲಾಗಿದೆ. ಈ ಯೋಜನೆಯು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಲಾಭದಾಯಕವಲ್ಲ. ” ಎಂದಿದ್ದಾರೆ.  ”ಸರ್ಕಾರದ ನಡೆ ದೊಡ್ಡ ದುರಂತ ಎಂದು ಬೆಕ್ಕಿನಕಲ್ ಮಠದ ಶ್ರೀ ಮಲ್ಲಿಕಾರ್ಜುನ ಮುರುಗರಾಜೇಂದ್ರ. ಸ್ವಾಮಿ ಹೇಳಿದ್ದಾರೆ.  ಕಳೆದ ಕೆಲವು ದಶಕಗಳಲ್ಲಿ, ಮಳೆ ತೀವ್ರವಾಗಿ ಕಡಿಮೆಯಾಗಿದೆ, ಮುಂಬರುವ ದಿನಗಳಲ್ಲಿ ವಿದ್ಯುತ್ ಉತ್ಪಾದನೆಗೆ ಸಹ ಸಾಕಷ್ಟು ನೀರು ಇರುವುದಿಲ್ಲ ಎಂದು ಅವರು ಹೇಳಿದರು. ಆದ್ದರಿಂದ, ಈ ಹಂತದಲ್ಲಿ ಮತ್ತೊಂದು ಯೋಜನೆಯನ್ನು ಕಾರ್ಯಗತಗೊಳಿಸುವುದು ಕೆಟ್ಟ ಆಲೋಚನೆ  ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT