ರಾಜ್ಯ

ನಾವು ಸಾಲಲ್ಲಿ ಕಾಯುತ್ತಿದ್ದೇವೆ, ನೀವು ಹೇಗೆ ದೇವರ ದರ್ಶನ ಮಾಡಿದಿರಿ: ಗೃಹಸಚಿವ ಪಾಟೀಲ್‌‌ಗೆ ಯುವತಿ ಪ್ರಶ್ನೆ

Raghavendra Adiga
ವಿಜಯಪುರ: "ನೀವು ಮಂತ್ರಿಯಾಗಿರಬಹುದು, ಆದರೆ ದೇವರ ದರ್ಶನಕ್ಕೆ ನೀವೂ ಎಲ್ಲರಂತೆ ಸಾಲಿನಲ್ಲೇ ನಿಲ್ಲಬೇಕು. ನಿಮಗಾಗಿ ವಿಶೇಷ ದರ್ಶನ ಅವಕಾಶ ಕಲ್ಪಿಸಿಕೊಳ್ಳುವುದು ಸರಿಯಲ್ಲ. ದೇವರು ಎಲ್ಲರಿಗೆ ಒಂದೇ ಅಲ್ಲವೆ?" ಇದು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಯುವತಿಯೊಬ್ಬಳು ಹಾಕಿದ ಸವಾಲ್.
ಮಹಾಶಿವರಾತ್ರಿ ಪ್ರಯುಕ್ತ ವಿಜಯಪುರದಲ್ಲಿ ಶಿವನ ದರ್ಶನ ಪಡೆಯಲು ನೂರಾರು ಭಕ್ತರು ಸರತಿಯಲ್ಲಿ ನಿಂತಿದ್ದ ವೇಳೆ ಸಚಿವ ಎಂಬಿ ಪಾಟೀಲ್ ನೇರವಾಗಿ ಆಗಮಿಸಿ ಈಶ್ವರನ ದರ್ಶನ ಪಡೆದಿದ್ದಾರೆ. ಈ ವೇಳೆ ಯುವತಿಯೊಬ್ಬಳು ಆಕ್ರೋಶಗೊಂಡು ನೇರವಾಗಿ ಸಚಿವರಿಗೆ ಈ ಸಂಬಂಧ ಪ್ರಶ್ನಿಸಿದ್ದಾಳೆ. ಆ ವೇಳೆ ಪಾಟೀಲ್ ಸಹ ತಾವು ಏಕೆ ಇಷ್ಟು ಅವಸರದಲ್ಲಿ ದರ್ಶನ ಪಡೆದಿದ್ದು ಎನ್ನುವುದನ್ನು ಯುವತಿಗೆ ವಿವರಿಸಲು ಯತ್ನಿಸಿದ್ದಲ್ಲದೆ ಅವಳಲ್ಲಿ ಕ್ಷಮೆಯಾಚನೆ ಸಹ ಮಾಡಿದ್ದಾರೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸಚಿವ ಎಂಬಿ ಪಾಟೀಲ್ ವಿಜಯಪುರದ ಎಲ್ಡಿಇ ಆವರಣದಲ್ಲಿರುವ ಪುರಾಣ ಪ್ರಸಿದ್ಧ 770 ಲಿಂಗಗಳ ಶಿವ ದೇವಾಲಯಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ.
"ನಾನು ಒಂದು ಗಂಟೆಯಿಂದ ಸರತಿಯಲ್ಲಿ ನಿಂತಿದ್ದೇನೆ. ನೀವು ಈಗಷ್ಟೇ ಬಂದು ದರ್ಶನ ಮಾಡಿದ್ದೀರಿ. ನೂರಾರು ಭಕ್ತರು ಅನೇಕ ಗಂಟೆಗಳ ಕಾಲ ಸರತಿಯಲಿ ನಿಂತಿರುವಾಗ ಸಚಿವರಾಗಿದ್ದ ಮಾತ್ರಕ್ಕೆ ನಿಯಮ ಗಾಳಿಗೆ ತೂರಿ ದರ್ಶನ ಪಡೆಯುವುದು ಅನ್ಯಾಯವಲ್ಲವೆ? ದೇವರು ಎಲ್ಲರಿಗೆ ಒಂದೇ ತಾನೆ?" ಯುವತಿ ಪ್ರಶ್ನಿಸಿದ್ದಾಳೆ. ಅಲ್ಲದೆ ಪಾಟೀಲ್ ಸಹ ಇತರೆ ಭಕ್ತರ ಹಾಗೆ ಸರತಿಯಲಿ ನಿಂತು ದರ್ಶನ  ಪಡೆಯಬೇಕು ಎಂದು ಆಕೆ ಒತ್ತಾಯಿಸಿದ್ದಾಳೆ.
ಆಗ ಪಾಟೀಲ್ ತಾವು ಈ ದಿನ ಇನ್ನೂ ಎರಡರಿಂದ ಮೂರು ಕಾರ್ಯಕ್ರಮಗಳಿಗೆ ಹಾಜರಾಗಬೇಕು. ಇಲ್ಲಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೇರೆ ಕಾರ್ಯಕ್ರಮಗಳಿಗೆ ತೆರಳಬೇಕಾಗಿದ್ದು ಈ ಕಾರಣದಿಂದ ನಾನು ತುರ್ತು ದರ್ಶನ ಪಡೆಇದ್ದೇನೆ ಎಂದು ವಿವರಣೆ ನೀಡಿದ್ದಾರೆ. ಅಲ್ಲದೆ ಆಕೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.
ಪಾಟೀಲ್ ಅವರ ವಿವರಣೆಗಳ ಕೇಳಿದ ಬಳಿಕ ಯುವತಿ ಅವರ ನಡತೆಗೆ ಮೆಚ್ಚುಗೆ ಸೂಚಿಸಿದಳು. ಹಾಗೆಯೇ ಅವರೊಡನೆ ಕೆಲವು ಫೋಟೋಗಳನ್ನು ಸಹ ತೆಗೆಸಿಕೊಂಡಳು.
SCROLL FOR NEXT