ಬೆಂಗಳೂರು: ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್ ನ ಆಹಾರದಲ್ಲಿ ವಿಷಕಾರಿ ಅಂಶಗಳಿದ್ದು, ಇಲ್ಲಿ ಆಹಾರ ಸೇವಿಸುವವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಆತಂಕಕಾರಿ ಪರಿಸ್ಥಿತಿ ಇದೆ ಎಂದು ಗೋವಿಂದರಾಜನಗರ ವಾರ್ಡ್ ನ ಬಿಬಿಎಂಪಿ ಸದಸ್ಯ ಕೆ. ಉಮೇಶ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಜತೆಗೆ ಇಂದಿರಾ ಕ್ಯಾಂಟಿನ್ ನಲ್ಲಿ ಬಡವರ ಹೆಸರಿನಲ್ಲಿ ತಪ್ಪು ಲೆಕ್ಕ ನೀಡಿ ಕೋಟ್ಯಂತರ ರೂ ಅಕ್ರಮ ನಡೆಸಲಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಶುಚಿತ್ವದ ಸಮಸ್ಯೆಯೂ ಸೇರಿದಂತೆ ಕ್ಯಾಂಟಿನ್ ನ ಅಕ್ರಮಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಕ್ಯಾಂಟಿನ್ ನಲ್ಲಿ ವಿಷಕಾರಿ ಆಹಾರ ಸೇವೆನೆ ಮಾಡಿದವರಿಗೆ ವಾಂತಿ ,ಭೇದಿ ಮತ್ತು ಮಿದುಳು ಸಂಭಂದಿಸಿದ ಖಾಯಿಲೆ ಮತ್ತು ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. 198ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಪ್ರತಿ ಕ್ಯಾಂಟೀನ್ ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಊಟ, ತಿಂಡಿ ಸೇವನೆ ಮಾಡುತ್ತಾರೆ ಎಂದು ಸುಳ್ಳು ಲೆಕ್ಕ ನೀಡಲಾಗುತ್ತಿದೆ. ಆದರೆ ವಾಸ್ತವವಾಗಿ ಕ್ಯಾಂಟೀನ್ ಗೆ 200 ಜನ ಸಹ ಬರುವುದಿಲ್ಲ .ಇಂದಿರಾ ಕ್ಯಾಂಟೀನ್ ನಲ್ಲಿ ಆಳವಡಿಸಿರುವ ಸಿ.ಸಿ.ಕ್ಯಾಮೆರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಎಷ್ಟು ಜನರು ಬಂದಿದ್ದಾರೆ ಎನ್ನುವ ಡಿಸ್ಪ್ಲೇ ಫಲಕವನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಲಾಗಿದೆ ಎಂದು ಆರೋಪಿಸಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ಉಳಿದ ಅನ್ನ ,ಸಾಂಬರ್ ಮತ್ತು ಇತರೆ ಆಹಾರವನ್ನು ಪೌರ ಕಾರ್ಮಿಕರಿಗೆ ನೀಡಲಾಗುತ್ತಿದೆ. ಅನ್ನ ಮತ್ತು ಸಾಂಬರ್ ನಾಲ್ಕು ಗಂಟೆಗಳ ಒಳಗೆ ಸೇವನೆ ಮಾಡಬೇಕು, ತದನಂತರ ಆಹಾರ ಕೆಡುತ್ತದೆ. ಅದನ್ನು ಸೇವನೆ ಮಾಡಿದರೆ .ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚೆಫ್ಟಾಕ್ ಮತ್ತು ರೀರ್ವಾಡ್ ಎಂಬ ಕಂಪನಿಗಳು ಪೌರ ಕಾರ್ಮಿಕರಿಗೆ ಊಟ ಸರಬರಾಜು ಮಾಡುವ ಗುತ್ತಿಗೆ ಪಡೆದಿವೆ, .ಎರಡು ಕಂಪನಿಗಳ ವಿರುದ್ದ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಉಮೇಶ್ ಶೆಟ್ಟಿ ಆಗ್ರಮಿಸಿದರು.
ಮುಖ್ಯಮಂತ್ರಿ ಕುಮಾರ ಸ್ವಾಮಿ,ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಹಾಪೌರರಾದ ಗಂಗಾಂಭಿಕೆ ಮಲ್ಲಿಕಾರ್ಜುನ್, ಮತ್ತಿತರ ಗಣ್ಯರು ವಾಸಿಸುವ ಸ್ಥಳಗಳಲ್ಲಿರುವ ಇಂದಿರಾ ಕ್ಯಾಂಟೀನ್ ಗಳ ಆಹಾರ ಪಧಾರ್ಥಗಳ ಮಾದರಿಗಳನ್ನು ಪ್ರತಿಷ್ಠಿತ ಆಹಾರ ಸಂಶೋಧನೆ ಲ್ಯಾಬ್ ಗಳಾದ ರಾಮಯ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಆಹಾರದ ಗುಣಮಟ್ಟ ಪರೀಕ್ಷಿಸಿದ್ದು, ಇವು ಸೇವನೆಗೆ ಯೋಗ್ಯವಲ್ಲದ ಎಂಬ ವರದಿ ಬಂದಿದೆ ಎಂದು ಗಂಭೀರವಾಗಿ ಆರೋಪಿಸದರು.
ಇಂದಿರಾ ಕ್ಯಾಂಟಿನ್ ನಿಂದ ಬೆಂಗಳೂರು ನಗರದ ಘನತೆಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ, ಲೋಕಯುಕ್ತ ಸಂಸ್ಥೆ ಮತ್ತು ಎ.ಸಿ.ಬಿ.ದೂರು ನೀಡಲಾಗುವುದು ಎಂದು ಕೆ.ಉಮೇಶ್ ಶೆಟ್ಟಿ ಇದೇ ಸಂದರ್ಭದಲ್ಲಿ ಹೇಳಿದರು.
ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ:
ಇಂದಿರಾ ಕ್ಯಾಂಟೀನ್ ನಲ್ಲಿ ಕಳಪೆ ಊಟ ದೊರೆಯುತ್ತಿದೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ತನಿಖೆ ನಡೆಸಲಾಗುವುದು. ತಾವು ಎರಡು ಮೂರು ಬಾರಿ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿದ್ದೇನೆ. ರುಚಿ ಹಾಗೂ ಶುಚಿ ಕಾಪಾಡಿಕೊಳ್ಳಲು ಸೂಚಿಸಿದ್ದೆ. ಆಹಾರ ಗುಣಮಟ್ಟದ ಕುರಿತು ಮಾಧ್ಯಮ ವರದಿ ಬಳಿಕ ಈ ಬಗ್ಗೆ ತನಿಖೆ ನಡೆಸಲು ಆಯುಕ್ತರಿಗೆ ಸೂಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿ 198 ವಾರ್ಡ್ ಗಳ ಎಲ್ಲ ಕ್ಯಾಂಟೀನ್ ಗಳಲ್ಲೂ ಆಹಾರದ ಗುಣಮಟ್ಟ ಪರೀಕ್ಷಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದರು.