ಬೆಂಗಳೂರು: ಅಂಧ ದಂಪತಿಗಳಿಂದ ಅಪಹರಣವಾಗಿದ್ದ ಮಗುವು ಮೂರು ದಿನಗಳ ಬಳಿಕ ಪತ್ತೆಯಾಗಿದ್ದು ದಂಪತಿಗಳ ಮುಖದಲ್ಲಿ ಖುಷಿ ಮೂಡಿದೆ.
ಬೆಂಗಳೂರಿನಲ್ಲಿದ್ದ ತಮ್ಮ ಸಂಬಂಧಿಗಳನ್ನು ಭೇಟಿಯಾಗುವ ಸಲುವಾಗಿ ರಾಯಚೂರಿನಿಂದ ಆಗಮಿಸಿದ್ದ ಬಸವರಾಜು ಹಾಗೂ ಚಿನ್ನು ಎಂಬುವ ಅಂಧ ದಂಪತಿಗಳ ಎಂಟು ತಿಂಗಳ ಮಗುವನ್ನು ಏಪ್ರಿಲ್ 27ರಂದು ಅಪರಿಚಿತ ಮಹಿಳೆಯೊಬ್ಬರು ಅಪಹರಿಸಿದ್ದರು.\
ಆತಂಕಗೊಂಡ ದಂಪತಿಗಳು ಉಪ್ಪಾರಪೇಟೆ ಪೋಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣವನ್ನ್ಯು ಗಂಭೀವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ತನಿಖೆಗೆ ತಂಡ ರಚಿಸಿದ್ದರು.
ದೂರು ದಾಖಲಾದ ಮೂರು ದಿನದ ತರುವಾಯ ಪತ್ರಿಕೆಯಲ್ಲಿ ಮಗು ಅಪಹರಣ ಸುದ್ದಿ ಪ್ರಕಟವಾಗಿದ್ದನ್ನು ಕಂಡ ಕೆಂಗೇರಿಯ ಲಕ್ಷ್ಮಿದೇವಿ ಹಾಗೂ ಪಾರ್ವತಮ್ಮ ಎಂಬುವವರು ಮಗುವನ್ನು ಉಪ್ಪಾರಪೇಟೆ ಠಾಣೆಗೆ ತಂದೊಪ್ಪಿಸಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆಯರ ಪೂರ್ವಾಪರ ಇನ್ನೂ ವಿಚಾರಣೆ ನಡೆಯಬೇಕಿದೆ, ಚಿತ್ರದುರ್ಗ ಮೂಲದ ಮಹಿಳೆಯರು ಮೇಲ್ನೋಟಕ್ಕೆ ಮುಗ್ದರಂತೆ ಕಾಣಿಸುತ್ತಿದ್ದಾರೆ, ಆದರೆ ಮಗುವಿಗೆ ನೀರು ಕುಡಿಸಲು ಕರೆದೊಯ್ದು ಅಪಹರಿಸಿದ ಮಹಿಳೆ ಯಾರೆಂಬ ಬಗ್ಗೆ ಮಾಹಿತಿ ತಿಳಿಯಬೇಕಿದೆ ಎಂದು ಪೋಲೀಸರು ವಿವರಿಸಿದ್ದಾರೆ. ಏನೇ ಆದರೆ ಈಗ ಮಗು ತಾಯಿಯ ಮಡಿಲು ಸೇರಿದ್ದು ಮಗು ಹಾಗೂ ದಂಪತಿಗಳಿಬ್ಬರೂ ನಿಶ್ಚಿಂತರಾಗಿದ್ದಾರೆ.