ಚಿಕ್ಕಬಳ್ಲಾಪುರ: ಹಸಿವು ತಾಳಲಾಗದೆ, ಮನೆಯಲ್ಲಿ ಏನೂ ಆಹಾರವಿರದ ಕಾರಣ ಮಣ್ಣು ತಿಂದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಕದಿರಿಯಲ್ಲಿ ನಡೆದಿದೆ. ಮೃತ ಮಕ್ಕಳು ಕರ್ನಾಟಕದ ಚಿಕ್ಕಬಳ್ಲಾಪುರ ಜಿಲ್ಲೆ ಬಾಗೇಪಲ್ಲಿ ಮೂಲದವರಾಗಿದ್ದು ಕೆಲ ವರ್ಷಗಳಿಂದ ಆಂಧ್ರದಲ್ಲಿ ನೆಲೆಸಿದ್ದರು.
ಕದಿರಿಯ ಕುಮ್ಮಾರವಂಡಲಪಲ್ಲೆ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಬಾಗೇಪಲ್ಲಿ ಮೂಲದ ಮಹೇಶ್ ಹಾಗೂ ನಾಗಮಣಿ ದಂಪತಿಗಳ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಸಾವನ್ನಪ್ಪಿದ್ದಾರೆ.
ಕೂಲಿ ಅರಸಿ ಕಳೆದ 10 ವರ್ಷಗಳ ಹಿಂದೆ ಈ ಕುಟುಂಬ ಆಂಧ್ರಪ್ರದೇಶಕ್ಕೆ ವಲಸೆ ಹೋಗಿತ್ತು. ಕಳೆದ ಮೂರು ವರ್ಷಗಳಿಂಡ ಕುಮ್ಮಾರವಂಡಲಪಲ್ಲೆ ವಾಸವಿದ್ದ ಮಹೇಶ್ ಕುಟುಂಬಕ್ಕೆ ಕೂಲಿ ಕೆಲಸವೇ ಆಧಾರವಾಗಿದೆ. ಮಹೇಶ್ ಕಲ್ಲು ಒಡೆಯುವ ಕಾಯಕ ನಡೆಸಿದ್ದಾರೆ. ಇವರಿಗೆ ಒಟ್ಟು ಆರು ಮಕ್ಕಳಿದ್ದಾರೆ.
ಮೃತ ಮಕ್ಕಳ ತಾಯಿ ನಾಗಮಣಿ ಹಾಗೂ ತಂದೆ ಮಹೇಶ್ ಸೇರಿ ಕುಟುಂಬದ ಎಲ್ಲರೂ ಮದ್ಯವ್ಯಸನಿಗಳಾಗಿದ್ದರು ಎಂದು ಹೇಳಲಾಗಿದೆ. ಕೆಲಸದ ಸಮಯದಲ್ಲಿ ಮಕ್ಕಳನ್ನು ಅಜ್ಜಿ ಸಮೀಪ ಬಿಟ್ಟು ಹೋಗಲಾಗುತ್ತಿತ್ತು. ಎಲ್ಲರೂ ಮದ್ಯಪಾನ ಮಾಡುತ್ತಿದ್ದು ಅದರ ನಶೆಯಲ್ಲೇ ಇರುತ್ತಿದ್ದ ಕಾರಣ ಮಕ್ಕಳಿಗೆ ಸರಿಯಾಗಿ ಊಟ ಹಾಕುತ್ತಿರಲಿಲ್ಲ. ಹಾಗಾಗಿ ಮನೆಯಲ್ಲಿ ಊಟ ವಿಲ್ಲದೆ, ತಿನ್ನಲು ಏನೂ ಸಿಕ್ಕದ ಮಕ್ಕಳು ಮಣ್ಣನ್ನು ತಿಂದು ಸಾವಿಗೀಡಾಗಿವೆ.
ಘಟನೆ ಬೆಳಕಿಗೆ ಬರುತ್ತಲೇ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೋಲೀಸರು ಕೂಡಾ ಮರುಕಪಟ್ಟಿದ್ದಾರೆ.
ಸಧ್ಯ ಸ್ಥಳೀಯ ಮಹಿಳಾ ಮಕ್ಕಳ ಕಲ್ಯಾಣಾಧಿಕಾರಿಗಳು ಉಳಿದಿರುವ ನಾಲ್ಕು ಮಕ್ಕಳಿಗೆ ಆಶ್ರಯ ದೊರಕಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.