ರಾಜ್ಯ

ಸರ್ಕಾರದ ಆಸ್ತಿ ವಶಕ್ಕಾಗಿ ಸಾಮಾಜಿಕ ಕಾರ್ಯಕರ್ತನಿಂದ ಸಿಎಂಗೆ ಪತ್ರ

Nagaraja AB

ಬಾಗಲಕೋಟೆ: ಜಿಲ್ಲೆಯ ಬಲಕುಂದಿಯ ವಿವಾದಿತ ಜಮೀನಿನಲ್ಲಿ ಮೆ. ಜೆಮ್ ಗ್ರಾನೈಟ್ಸ್ ಕಂಪನಿ ಗಣಿಗಾರಿಕೆ ನವೀಕರಣಕ್ಕೆ ಕೋರಿದ್ದ ಮನವಿ ತಿರಸ್ಕಾರಗೊಂಡಿರುವ ಹಿನ್ನೆಲೆಯಲ್ಲಿ ಕಂಪನಿಗೆ ನೀಡಿದ್ದ ಜಮೀನು ಕೂಡಲೇ ವಶಕ್ಕೆ ಪಡೆದುಕೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಹೊಂಗಲ್  ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿರುವ ಅವರು ಜೆಮ್ ಕಂಪನಿ ಇಳಕಲ್‌ನ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಒಡೆತನದ ಜಮೀನುಗಳನ್ನು ಗುತ್ತಿಗೆಗೆ ಪಡೆದು ೧೯೭೭-೭೮ರಿಂದಲೂ ಕಲ್ಲು ಗಣಿಗಾರಿಕೆ ನಡೆಸುತ್ತಿದೆ. 

ಈ ಹಿಂದೆ ಕಂಪೆನಿಗೆ ಕಲ್ಲು ಗಣಿಗಾರಿಕೆ ಪರವಾನಗಿಯನ್ನು ನೀಡುವಾಗ ಹಾಗೂ ನವೀಕರಣ/ ಅವಧಿ ವಿಸ್ತರಣೆ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಾಕಷ್ಟು ತಪ್ಪುಗಳನ್ನು ಮಾಡಿದ್ದಾರೆ.

ಮಹಾಂತೇಶ ವಿದ್ಯಾವರ್ಧಕ ಸಂಘದ ಜಮೀನುಗಳನ್ನು ೧೯೯೫ ಆಗಸ್ಟ್ ೫ ರಂದು ಅಂದಿನ  ವಿಜಯಪುರ ಜಿಲ್ಲಾಧಿಕಾರಿಗಳು, `ಈ ಜಮೀನುಗಳು ಬಾಂಬೆ ಇನಾಮು ರದ್ದತಿ ಶಾಸನದ ಪ್ರಕಾರ ಸರಕಾರಕ್ಕೆ ಸೇರಿದವುಗಳಾಗಿವೆ'ಎಂದು ಅವುಗಳನ್ನು ವಶಕ್ಕೆ ತೆಗೆದುಕೊಂಡರು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಡಿಸಿ ಕ್ರಮವನ್ನು ಸಂಘ -ಜೆಮ್ ಕಂಪೆನಿ ನಂತರ ಸುಪ್ರೀಮ್ ಕೋರ್ಟ್ ನಲ್ಲಿ ಪ್ರಶಿಸಿದ್ದವು. ಜಿಲ್ಲಾಧಿಕಾರಿ ಕ್ರಮವನ್ನು ಸಮರ್ಥಿಸಿದ ಸುಪ್ರೀಮ್ ಕೋರ್ಟ್ ಜಮೀನು ಒಡೆತನದ ವಿವಾದವನ್ನು ಸ್ಥಳೀಯ ಕೋರ್ಟ್ ನಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ಹುನಗುಂದದ ಸಿವಿಲ್ ಕೋರ್ಟ್ ೨೦೧೪ ರ ಜನವರಿ ೭ ರಂದು ಅಂತಿಮ ತೀರ್ಪು ನೀಡಿ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದು ಅರ್ಜಿದಾರರ ಅರ್ಜಿಯನ್ನು ವೆಚ್ಚ ಸಮೇತ ವಜಾಗೊಳಿಸಿತ್ತು. 

ಇದೇ ಆದೇಶವನ್ನು ಮತ್ತೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ಪ್ರಶ್ನಿಸಲಾಗಿದ್ದು ಅದು ವಿಚಾರಣೆ ಹಂತದಲ್ಲಿದೆ. ಹೀಗೆ ಪ್ರಕರಣವು ಕೋರ್ಟ್ ನಲ್ಲಿ  ವಿಚಾರಣೆ ಹಂತದಲ್ಲಿರುವಾಗಲೇ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಅಧಿಕಾರಿಗಳು ಕಡತವನ್ನು ಹಾಗೇ ಇಡಬೇಕೆಂದು ಕೇಳಿಕೊಂಡರೂ ಸರಕಾರದ ಮಟ್ಟದಲ್ಲಿ ನಿಯಮಾವಳಿ ಮೀರಿ ಜೆಮ್ ಕಂಪನಿಗೆ ಗಣಿಗಾರಿಕೆ ಅವಧಿಯನ್ನು ೧೯೯೯ ಮತ್ತು ೨೦೦೯ರಲ್ಲಿ ವಿಸ್ತರಿಸಿದೆ ಎಂದು ಅವರು ತಿಳಿಸಿದ್ದಾರೆ.

ವಿಸ್ತರಿಸಲ್ಪಟ್ಟ ಗಣಿಗಾರಿಕೆ ಅವಧಿ ೨೦೧೯ ಸೆಪ್ಟಂಬರ್ ೧೬ ರಂದು ಮುಗಿಯಲಿದೆ. ಸರಕಾರ, ಗಣಿಗಾರಿಕೆ ಅವಧಿಯನ್ನು ಯಾವುದೇ ಕಾರಣಕ್ಕೂ ಮತ್ತೆ ನವೀಕರಿಸಬಾರದು. ಗಣಿಗಾರಿಕೆ ಅವಧಿ ಮುಗಿದ ತಕ್ಷಣವೇ ಸರಕಾರದ ಆಸ್ತಿಯನ್ನು ಜಿಲ್ಲಾಧಿಕಾರಿಗಳು ತಕ್ಷಣವೇ ವಶಕ್ಕೆ ಪಡೆಯಬೇಕು" ಎಂದು ಕೋರಿ ಸರಕಾರ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ೨೦೧೯ರ ಸೆಪ್ಟಂಬರ್ ೧೩ ರಂದು ಲಿಖಿತ ಮನವಿ ಮಾಡಿಕೊಳ್ಳಲಾಗಿತ್ತು. 

ಇದಕ್ಕೆ ಪ್ರತಿಯಾಗಿ ಬಾಗಲಕೋಟೆ ಜಿಲ್ಲಾ ಗಣಿ ಇಲಾಖೆ ಅಧಿಕಾರಿಗಳು ಜೆಮ್ ಕಂಪೆನಿಯು ಗಣಿಗಾರಿಕೆ ಅವಧಿ ನವೀಕರಣಕ್ಕಾಗಿ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದು ಪ್ರಕರಣ ಇತ್ಯರ್ಥವಾದ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂಬರಹ ನೀಡಿದ್ದರು. ಇದೀಗ ಹೈಕೋರ್ಟ್  ೨೦೧೯ ಸೆಪ್ಟಂಬರ್ ೧೭ ರಂದು ಜೆಮ್ ಕಂಪೆನಿಯ ಮನವಿಯನ್ನು ತಿರಸ್ಕರಿಸಿದೆ. 

ಕೂಡಲೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಸರಕಾರದ ಆಸ್ತಿಯನ್ನು ವಶಕ್ಕೆ ಪಡೆದು ಸರಕಾರಿ ಆಸ್ತಿ ರಕ್ಷಣೆಗೆ ಮುಂದಾಗುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ವರದಿ: ವಿಠಲ್ ಬಾಳಾಕುಂದಿ 
 

SCROLL FOR NEXT