ರಾಜ್ಯ

ಬೆಂಗಳೂರು: ಡ್ರಾಪ್‌ ಕೊಡುವುದಾಗಿ ನಂಬಿಸಿ ದರೋಡೆ, 3 ಆರೋಪಿಗಳ ಬಂಧನ

Raghavendra Adiga

ಬೆಂಗಳೂರು: ಬಸ್‌ಗಾಗಿ ಕಾಯುತ್ತಿದ್ದವರಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕಾರಿಗೆ ಹತ್ತಿಸಿಕೊಂಡು ಚಾಕು, ನಕಲಿ ಗನ್ ತೋರಿಸಿ ಬೆದರಿಸಿ ನಗದು ಚಿನ್ನಾಭರಣಗಳನ್ನು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬ್ಯಾಟರಾಯನಪುರದ ಖದೀಮರಾದ ಸಲೀಂ ಪಾಷ, ಅಬ್ದುಲ್ ಸುಲೆಮಾನ್ ಮತ್ತು ರಾಜೇಶ್ ರಾಯ್‌ ಬಂಧಿತ ಆರೋಪಿಗಳು. ಅವರಿಂದ ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಫಿಸ್ಟ್ ಕಾರು, ಚಾಕು, ನಕಲಿ ಗನ್, ಫೋನ್ ಮತ್ತು 14,600 ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಬೆಂಗಳೂರು ನಗರದ ಸಿದ್ದಾಪುರ, ಜಯನಗರ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ನಿನ್ನೆ ಮುಂಜಾನೆ ಕೆ.ಆರ್. ಪುರಂ ಸಮೀಪ ನಾಗರಾಜ್ ಅವರಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕಾರಿನಲ್ಲಿ ಅಪಹರಿಸಿದ್ದಾರೆ. ಬಿಡದಿಯ ಬೈರಮಂಗಲ ಚೆಕ್ ಪೋಸ್ಟ್ ಬಳಿ ಪೋಲೀಸರನ್ನು ಕಂಡ ನಾಗರಾಜ್ ಸಹಾಯಕ್ಕೆ ಕೂಗಿದ್ದಾರೆ. ಆಗ ಕರ್ತವ್ಯದಲ್ಲಿದ್ದ ಪೋಲೀಸರು ಕಾರನ್ನು ಬೆನ್ನಟ್ಟಿ ಸಿನಿಮೀಯ ರಿತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಬಿಡದಿ ಹಾಗೂ ಸಂಪಿಗೆನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರಾಮನಗರ ಜಿಲ್ಲಾ ಪೋಲೀಸ್ ವರಿಷ್ಟರು ಹೇಳಿದ್ದಾರೆ.
 

SCROLL FOR NEXT