ರಾಜ್ಯ

ಲೇಖಾನುದಾನ ಮಂಡಿಸಿ, ಅದೇ ದಿನ ಅನುಮೋದನೆ ಪಡೆಯುವುದು ಸರಿಯಲ್ಲ: ಕೃಷ್ಣ ಬೈರೇಗೌಡ ಆಕ್ಷೇಪ

Shilpa D

ಬೆಂಗಳೂರು: ಹಣಕಾಸು ವಿಧೇಯಕ, ಹಣಕಾಸು ಬೇಡಿಕೆಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಕನಿಷ್ಠ 15 ದಿನಗಳಿಗಿಂತ ಕಡಿಮೆ ಇರಬಾರದು ಎಂಬ ನಿಯಮವಿದ್ದರೂ ಒಂದೇ ದಿನದಲ್ಲಿ ಸರ್ಕಾರ ಅನುಮೋದನೆ ಪಡೆಯಲು ಮುಂದಾಗಿರುವುದು ಸರಿಯಲ್ಲ. ವಿಧೇಯಕದಲ್ಲಿ ಏನಿದೆ, ಏನಿಲ್ಲ ಎಂಬುದರ ಬಗ್ಗೆ ಚರ್ಚೆ ನಡೆಸಬೇಕಾಗಿದೆ. 

ಸದನವನ್ನು ಕೇವಲ ಅಂಚೆಯ ಸ್ಟಾಂಪ್‌ಗೆ ಸೀಮಿತಗೊಳಿಸಬಾರದು ಎಂದು ಕಾಂಗ್ರೆಸ್ ಸದಸ್ಯ, ಮಾಜಿ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ವಿತ್ತೀಯ ಕಾರ್ಯಕಲಾಪಗಳನ್ನು ಮಂಡಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸದನದಲ್ಲಿ ಮುಂದಾದಾಗ ಕೃಷ್ಣಬೈರೇಗೌಡ ಆಕ್ಷೇಪವೆತ್ತಿ, ಹಣಕಾಸು ಬೇಡಿಕೆಗಳ ಮೇಲೆ ಸಮಗ್ರ ಚರ್ಚೆಯಾಗಬೇಕು. ನಿಯಮ ಕೂಡ ಇದನ್ನೇ ಹೇಳುತ್ತದೆ ಎಂದು ಸ್ಪೀಕರ್ ಅವರ ಗಮನ ಸೆಳೆದರು.

ಆಗ ಸಚಿವ ಮಾಧುಸ್ವಾಮಿ ಮಾತನಾಡಿ, 15 ದಿನಗಳ ವರೆಗೆ ಚರ್ಚೆ ನಡೆಸಬೇಕು ಎಂಬ ಸದನದ ನಿಯಮವಿದ್ದರೂ ಈ ಹಿಂದೆ ಒಂದೇ ಬಾರಿ ಲೇಖಾನುದಾನ ಮಂಡಿಸಿರುವುದು, ಅನುಮೋದನೆ ಪಡೆದುಕೊಂಡಿರುವುದೂ ಈ ಸದನದಲ್ಲಿ ನಡೆದಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಸದನವನ್ನು ಮೂರು ದಿನಕ್ಕೆ ಇಳಿಸಲಾಗಿದೆ. 

ನಮಗೂ ಬೇಡಿಕೆ ಮೇಲೆ ಚರ್ಚೆ ಮಾಡುವ ಆಸಕ್ತಿ ಇದೆ. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಲಾಪವನ್ನು ಮೂರು ದಿನಕ್ಕೆ ಇಳಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಸಂಪ್ರದಾಯದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದರು.

SCROLL FOR NEXT