ರಾಜ್ಯ

ಪರಮೇಶ್ವರ್ ಪಿಎ ಆತ್ಮಹತ್ಯೆ: ಐಟಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಮೇಶ್ ಸಹೋದರ ಆಗ್ರಹ

Manjula VN

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ ಆಪ್ತ ಕಾರ್ಯದರ್ಶಿ ರಮೇಶ್ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ, ರಮೇಶ್ ಅವರ ಕುಟುಂಬಸ್ಥರು ಆದಾಯ ತೆರಿಗೆ ಇಲಾಖೆ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

ರಮೇಶ್ ಅವರು ಆತ್ಮಹತ್ಯೆಗೆ ಶರಣಾಗಿದ್ದ ಹಿನ್ನಲೆಯಲ್ಲಿ ನಿನ್ನೆ ಜ್ಞಾನಭಾರತಿ ಆವರಣದಲ್ಲಿ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು, ರಮೇಶ್ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ಪೊಲೀಸರು ತಡವಾಗಿ ಪ್ರಕ್ರಿಯೆ ನಡೆಸುತ್ತಿದ್ದಾರೆಂದು ಹೇಳಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. 

ರಮೇಶ್ ಅವರ ಮೃತದೇಹ ನೋಡಲು ಅವರ ಸಹೋದರ ಹಾಗೂ ತಾಯಿ ಸಾವಿತ್ರಮ್ಮ ಅವರಿಗೆ ಮಾತ್ರವೇ ಅಧಿಕಾರಿಗಳು ಅವಕಾಶ ನೀಡಿದ್ದರು. ಆದರೆ, ಇಬ್ಬರು ಸಹೋದರಿಯರಿಗೆ ಅವಕಾಶ ನೀಡಿರಲಿಲ್ಲ. ಸಾಕಷ್ಟು ಮಾತಿನ ಚಕಮಕಿ ಬಳಿಕ ಮಧ್ಯಾಹ್ನ 3 ಗಂಟೆ ಬಳಿಕ ಮೃತದೇಹ ನೋಡಲು ಅವಕಾಶ ಮಾಡಿಕೊಟ್ಟಿದ್ದರು. ಪುತ್ರನ ಸಾವಿನ ವಿಚಾರ ಕೇಳಿದ ಕೂಡಲೇ ರಮೇಶ್ ಅವರ ತಂದೆ ನೆಲಕ್ಕೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಕೊಡಿಸಲಾಗಿತ್ತು. ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. 

ರಮೇಶ್ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಪೊಲೀಸರು ತಡೆ ಹಿಡಿದಿದ್ದರು. ರಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿದ್ದ ಎರಡು ಮೊಬೈಲ್ ಫೋನ್ ಗಳು, ಕಾರು, ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. 

ಪ್ರಕರಣ ಸಂಬಂಧ ಪ್ರತ್ಯಕ್ಷದರ್ಶಿ ಮುಕುಂದ್ ಎಂಬುವವರು ಮಾತನಾಡಿ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮೈದಾನದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದೆ. ಈ ವೇಳೆ ಕಾರನ್ನು ನಿಲ್ಲಿಸಿದ್ದ ವ್ಯಕ್ತಿಯೊಬ್ಬರು ಮರ ಹಾಗೂ ಗಿಡಗಳಿದ್ದ ತೋಪಿನ ಒಳಗೆ ಹೋಗುತ್ತಿದ್ದುದ್ದನ್ನು ನೋಡಿದ್ದೆ. ಮೂತ್ರ ವಿಸರ್ಜನೆ ಹೋಗುತ್ತಿರಬಹುದು ಎಂದು ತಿಳಿದಿದ್ದೆ. ಆತ್ಮಹತ್ಯೆ ವಿಚಾರ ತಿಳಿದ ನಂತರವೇ ನಾನು ನೋಡಿದ ವ್ಯಕ್ತಿ ಅವರೇ ಎಂಬುದು ತಿಳಿಯಿತು ಎಂದು ಹೇಳಿದ್ದಾರೆ. 

ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಇದೀಗ ರಮೇಶ್ ಅವರ ಮೃತದೇಹವನ್ನು ಶನಿವಾರ ಸಂಜೆ ಕುಟುಂಬಸ್ಥರ ವಶಕ್ಕೆ ನೀಡಲಾಗಿದ್ದು, ಅಂತಿಮ ಸಂಸ್ಕಾರಕ್ಕಾಗಿ ಕುಟುಂಬಸ್ಥರು ಮೃತದೇಹವನ್ನು ಹುಟ್ಟೂರು ರಾಮನಗರದ ಮೇಲೆಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. 

SCROLL FOR NEXT