ಬೆಂಗಳೂರು: ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಪರಿಹಾ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ರೈತರಿಂದ ಕಮಿಷನ್ ಪಡೆಯುತ್ತಿದ್ದ ಆರೋಪದ ಮೇಲೆ 6 ಮಂದಿ ಮಧ್ಯವರ್ತಿ ಹಾಗೂ ಓರ್ವ ಕೆಐಎಡಿಬಿ ಅಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ದೇವರಾಜ್, ನಾರಾಯಣ ಸ್ವಾಮಿ, ಜಗದೀಶ್, ನವೀನ್ ಕುಮಾರ್, ಸಮೀರ್ ಪಾಷ, ಕೇಶವ ಮತ್ತು ಕೆಐಎಡಿಬಿಯ ಎಸ್ಎಲ್ಎಓ-2 ವಿಭಾಗದ ಹಿರಿಯ ಸಹಾಯಕ ಎಲ್.ಶ್ರೀನಿವಾಸ ಎಂದು ಗುರ್ತಿಸಲಾಗಿದೆ.
ತಪಾಸಣೆ ವೇಳೆ ಭೂ ಪರಿಹಾರ ಮೊತ್ತವನ್ನು ನಿಜವಾದ ರೈತರಿಗೆ ನೀಡದೆ ಮಧ್ಯವರ್ತಿಗಳ ಮೂಲಕ ಕೆಐಎಡಿಬಿ ಅಧಇಕಾರಿಘಳು ಗುರುತಿಸಿರುವ ರೈತರಿಗೆ ನೀಡಿ ಅಕ್ರಮ ಸಂಭಾವನೆ ಪಡೆದುಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರವು ಸೋಂಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶಕ್ಕಾಗಿ ಸುಮಾರು 800 ಎಕರೆ ಜಮೀನನ್ನು ರೈತರಿಂದ ವಶಪಡಿಸಿಕೊಂಡಿದೆ. ಭೂ ಪರಿಹಾರ ಮೊತ್ತದ ಪೈಕಿ ರೂ.50 ಕೋಟಿಗಳನ್ನು ಸೆ.20ರಂದು ಬಿಡುಗಡೆ ಮಾಡಿದೆ. ಕೆಐಎಡಿಬಿ ಅಧಿಕಾರಿ ಮತ್ತು ಸಿಬ್ಬಂದಿ ಭೂ ಪರಿಹಾರ ಮೊತ್ತದಲ್ಲಿ ಶೇ.10ರಷ್ಟು ಹಣವನ್ನು ಪಡೆದು ಮಧ್ಯವರ್ತಿಗಳ ಮೂಲಕ ಪರಿಹಾರ ಹಣ ಸುಲಭವಾಗಿ ಖಾತೆಗೆ ಆರ್'ಟಿಜಿಎಸ್ ಮಾಡಿಸುವುದಾಗಿ ರೈತರಿಗೆ ಆಶ್ವಾಸನೆ ನೀಡಿ ಖಾಲಿ ಚೆಕ್ ಗಳನ್ನು ಪಡೆದು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಕಮಿಷನ್ ಕೊಡದ ರೈತರನ್ನು ಕಚೇರಿಗೆ ಹಲವು ಸಲ ಅಲೆದಾಡಿಸಿ ತೊಂದರೆ ಕೊಡುತ್ತಿದ್ದರು.