ರಾಜ್ಯ

ಐಎಂಎ ಹಗರಣ: 2 ಮೌಲ್ವಿಗಳ ವಿರುದ್ಧ ಸಿಬಿಐ 2ನೇ ಚಾರ್ಜ್'ಶೀಟ್

Manjula VN

ಬೆಂಗಳೂರು: ಬಹುಕೋಟಿ ಐಎಂಎ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮೌಲ್ವಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎರಡನೇ ಆರೋಪಪಟ್ಟಿ ಸಲ್ಲಿಸಿದೆ. 

ಶಿವಾಜಿನಗರದ ಮಸೀದ್-ಇ-ಬೆಪರಿಯಾನ್'ನ ಮೌಲಾನಾ ಹನೀಫ್ ಅಫ್ಜರ್ ಅಜೀಜ್ ಹಾಗೂ ಕೋಲಾರದ ಮೌಲ್ವಿ ಕಲೀಮ್-ಉಲ್ಲಾ-ಜಮಲ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120ಬಿ (ಅಪರಾಧ ಪಿತೂರಿ, 420 (ವಂಚನೆ), 409 (ನಂಬಿಕೆ ದ್ರೋಹ)ಅಡಿಯಲ್ಲಿ ಎರಡನೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 

ಕಳೆದ ಜುಲೈ ತಿಂಗಳಿನಲ್ಲಿ ಹನೀಫ್ ಅವರನ್ನು ಕರ್ನಾಟಕದ ಎಸ್ಐಟಿ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. 


ಹನೀಫ್ ಶಿವಾಜಿನಗರದ ಓಪಿಹೆಚ್ ರಸ್ತೆಯಲ್ಲಿರುವ ಬೇಪಾರಿಯನ್ ಮಸೀದಿಯ ಧರ್ಮಗುರುವಾಗಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆಗೆ ಬರುವ ತನ್ನ ಸಮುದಾಯದವರಿಗೆ ಐಎಂಎಯಲ್ಲಿ ಹೂಡಿಕೆ ಮಾಡುವಂತೆ ಪ್ರಚೋದನೆ ನೀಡುತ್ತಿದ್ದರೆಂದು ಹೇಳಲಾಗುತ್ತಿತ್ತು. ಇವರ ಮಾತನ್ನು ನಂಬಿ ಸಾವಿರಾರು ಜನರು ಹಣ ಹೂಡಿಕೆ ಮಾಡಿದ್ದರು. ಮೌಲ್ವಿ ಅವರು 2017ರಲ್ಲಿ ಹೆಚ್'ಬಿಆರ್ ಲೇಔಟ್ ನಲ್ಲಿ ಮೂರು ಕೋಟಿ ಮೌಲ್ಯದ ಮನೆಯೊಂದನ್ನು ಖರೀದಿ ಮಾಡಿದ್ದರು. ಹೆಚ್ಚೆಚ್ಚು ಜನರಿಂದ ಹಣ ಹೂಡಿಕೆ ಮಾಡಿಸಿದ್ದ ಕಾರಣಕ್ಕೆ ಮೌಲ್ವಿಗೆ ಋಣಸಂದಾಯ ಮಾಡಲು ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ಈ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದ ಎಂದು ಹೇಳಲಾಗುತ್ತಿದೆ. 

SCROLL FOR NEXT