ರಾಜ್ಯ

ಪೊಲೀಸ್ ಠಾಣೆಗಳಲ್ಲಿ ಹೊಸ ಸಮಸ್ಯೆ: ಅಪಮೌಲ್ಯಗೊಂಡ ನೋಟುಗಳ ಕಂತೆ ಇಡಲು ಜಾಗದ ಕೊರತೆ!

Sumana Upadhyaya

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಗೊಳಿಸಿ ಮೂರು ವರ್ಷವಾಗುತ್ತಾ ಬಂದಿದೆ. ಅಧಿಕ ಮೌಲ್ಯದ ನೋಟುಗಳ ಅಪಮೌಲ್ಯೀಕರಣದಿಂದ ಪೊಲೀಸರು ವಿಚಿತ್ರ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿದೆ. 


ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಮತ್ತು ಇತರ ಅಪರಾಧ ಪ್ರಕರಣಗಳನ್ನು ಬೇಧಿಸಿದ ಸಂದರ್ಭದಲ್ಲಿ ಸಿಕ್ಕಿದ ಚಲಾವಣೆ ರದ್ದುಗೊಂಡ ನೋಟುಗಳಿಂದ ರಾಜ್ಯದ ಅನೇಕ ಪೊಲೀಸ್ ಠಾಣೆಗಳು ತುಂಬಿ ಹೋಗಿವೆ. ನ್ಯಾಯಾಲಯಗಳಲ್ಲಿ ಕೇಸುಗಳ ವಿಚಾರಣೆ ವೇಳೆ ಸಾಕ್ಷಿಯಾಗಿ ಪೊಲೀಸರು ಈ ನೋಟುಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಜಾಗವಿಲ್ಲದೆ ಲಾಕರ್ ರೂಂ ಇಲ್ಲದೆ ಸಮಸ್ಯೆ ಉಂಟಾಗಿದೆ.


ರಿಸರ್ವ್ ಬ್ಯಾಂಕು ಹೊರಡಿಸಿರುವ ಬಹುತೇಕ ಹಳೆ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ ರಾಜ್ಯದುದ್ದಕ್ಕೂ ಪೊಲೀಸ್ ಠಾಣೆಗಳಲ್ಲಿ ಲಕ್ಷಾಂತರ ರೂಪಾಯಿ ಅಪಮೌಲ್ಯಗೊಂಡ ನೋಟುಗಳು ಇವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ಸಿಕ್ಕಿದೆ.


ಬೆಂಗಳೂರು ನಗರವೊಂದರಲ್ಲಿಯೇ, 81.3 ಲಕ್ಷ ಮೌಲ್ಯದ ಅಪಮೌಲ್ಯಗೊಂಡ ಮತ್ತು ನಕಲಿ ಕರೆನ್ಸಿಗಳನ್ನು ಈ ಜುಲೈಯವರೆಗೆ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಈ ವರ್ಷ ಅಧಿಕ ಅಪಮೌಲ್ಯಗೊಂಡ ನೋಟುಗಳು ವಶಪಡಿಸಲಾಗಿದ್ದು ತುಮಕೂರಿನಲ್ಲಿ 1.06 ಲಕ್ಷ ವಶವಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಪೊಲೀಸರು ವಶಪಡಿಸಿಕೊಂಡ ಅಪಮೌಲ್ಯಗೊಂಡ ನೋಟುಗಳ ಮೌಲ್ಯ 4.75 ಕೋಟಿ ರೂಪಾಯಿ, ಬೆಳಗಾವಿಯಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ, ಬೆಂಗಳೂರಿನಲ್ಲಿ 27.1 ಲಕ್ಷ ಅಪಮೌಲ್ಯಗೊಂಡ ನೋಟುಗಳು ವಶವಾಗಿದ್ದವು.


ಸಾಮಾನ್ಯವಾಗಿ ಅಧಿಕ ಮೊತ್ತದ ಆಸ್ತಿಗಳನ್ನು ವಶಪಡಿಸಿಕೊಂಡರೆ ಅದು ರಾಜ್ಯ ಸರ್ಕಾರದ ಖಜಾನೆಗೆ ಹೋಗುತ್ತದೆ. ಇಲ್ಲದಿದ್ದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆಸ್ತಿ ಎಂದು ಬರೆದು ಇಟ್ಟಿರುತ್ತಾರೆ. ಈ ಆಸ್ತಿಯನ್ನು ಆಸ್ತಿ ನಿಧಿ ಎಂದು ದಾಖಲು ಮಾಡಲಾಗುತ್ತದೆ ಎನ್ನುತ್ತಾರೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್.


ಹೀಗೆ ಸಿಕ್ಕಿರುವ ಸಾಕ್ಷಿಗಳನ್ನು ಸಂಗ್ರಹಿಸಿಡಲು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಲಾಕರ್ ರೂಂನ ವ್ಯವಸ್ಥೆಯಿರಬೇಕು. ಹಲವು ಠಾಣೆಗಳಲ್ಲಿ ಈ ಸೌಲಭ್ಯಗಳಿಲ್ಲ. ಅಂತ ಕಡೆಗಳಲ್ಲಿ ಸ್ಟೀಲ್ ಅಲ್ಮೆರಾ ಅಥವಾ ಮರದ ಕಪ್ ಬೋರ್ಡ್ ನಲ್ಲಿ ಇಡಲಾಗುತ್ತದೆ. ನಮ್ಮಲ್ಲಿ ಇರುವ ಜಾಗದಲ್ಲಿ ನಾವು ಹೇಗೋ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು.

SCROLL FOR NEXT