ರಾಜ್ಯ

ಬೆಂಗಳೂರು: ಬೈಕ್'ನಲ್ಲಿ ಹೋಗುತ್ತಿದ್ದ ರೌಡಿಯ ಅಟ್ಟಾಡಿಸಿ ಬರ್ಬರ ಹತ್ಯೆ!

Manjula VN

ಬೆಂಗಳೂರು: ರೌಡಿಶೀಟರ್ ವೊಬ್ಬನನ್ನು ಮಹದೇವಪುರದ ಫೀನಿಕ್ಸ್ ಮಾಲ್ ಬಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. 

ಕಾಡುಬೀಸನಹಳ್ಳಿ ನಿವಾಸಿ ಮಂಜುನಾಥ್ ಅಲಿಯಾಸ್ ಮಂಜು (28) ಹತ್ಯೆಯಾದ ರೌಡಿಯಾಗಿದ್ದಾನೆ. ಮಂಜುನಾಥ್ ಮಾರತಹಳ್ಳಿಯ ಠಾಣಾ ವ್ಯಾಪ್ತಿಯ ರೌಡಿಶೀಟರ್. ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರ ಬಂದ ಬಳಿಕವೂ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ. 

ಮೃತ ಮಂಜುನಾಥ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಯುವತಿಯೊಬ್ಬರನ್ನು ಎನ್'ಫೀಲ್ಡ್ ಬೈಕ್ ನಲ್ಲಿ ಕೂರಿಸಿಕೊಂಡು ಮಹದೇವಪುರ ಫೀನಿಕ್ಸ್ ಮಾಲ್ ಬಳಿ ಹೋಗುತ್ತಿದ್ದ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಮಂಜನ ಮೇಲೆ ಎರಗಿ ಮನಬಂದಂತೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಮಂಜ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಮೃತನ ಜೊತೆಗಿದ್ದ ಯುವತಿ ಕೃತ್ಯದಿಂದ ಹೆದರಿ ಚೀರಾಡುತ್ತ ಸ್ಥಳದಿಂದ ಓಡಿ ಹೋಗಿದ್ದಾಳೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

SCROLL FOR NEXT