ರಾಜ್ಯ

ಒಕ್ಕಲಿಗ ಸಮುದಾಯಕ್ಕೆ ಆದರ್ಶವಾಗಬೇಕಾದವರು ಯಾರು..?: ಸಚಿವ ಸಿ.ಟಿ. ರವಿ ಪ್ರಶ್ನೆ 

Sumana Upadhyaya

ಮೈಸೂರು: ಒಕ್ಕಲಿಗ ಸಮುದಾಯಕ್ಕೆ ಯಾರು ಆದರ್ಶವಾಗಬೇಕು ಎಂಬುದನ್ನು ಪ್ರತಿಭಟನಾಕಾರರೇ ತೀರ್ಮಾನ ಮಾಡಲಿ.ಶಾಂತವೇರಿ ಗೋಪಾಲಗೌಡರು, ಕುವೆಂಪು, ಕೆಂಗಲ್  ಹನುಮಂತಯ್ಯ ಅವರಂತಹ ಮಹನೀಯರು ಆದರ್ಶವಾಗಿರಬೇಕೇ?  ಅಥವಾ  ಬೇರೆಯವರು ಆದರ್ಶ  ಆಗಬೇಕೇ?  ಎಂಬುದನ್ನು ಸಮುದಾಯದ ಜನರು  ತೀರ್ಮಾನಿಸಲಿ. ಸತ್ಯವಂತರಿಗೆ ಇದು ಕಾಲವಲ್ಲ, ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಾರ್ಥವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಪ್ರತಿಭಟನಾನಿರತರಿಗೆ ತಿರುಗೇಟು ನೀಡಿದ್ದಾರೆ.


ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯವಂತರಿಗೆ ಇದು ಕಾಲವಲ್ಲ.ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ. ಜಾರಿ ನಿರ್ದೇಶನಾಲಯಕ್ಕೆ ಯಾವ ಜಾತಿ ಇದೆ,ಯಾವ ಪಕ್ಷ ಇದೆ. ಜಾರಿ ನಿರ್ದೇಶನಾಲಯವನ್ನು ಹುಟ್ಟಿಹಾಕಿದವರು ಯಾರು? ಭಾರತೀಯ ಜನತಾ ಪಾರ್ಟಿ ಜಾರಿ ನಿರ್ದೇಶನಾಲಯವನ್ನು ಹುಟ್ಟುಹಾಕಿಲ್ಲ, ಡಿಕೆ ಶಿವಕುಮಾರ್ ಅವರ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ  ಸಂಬಂಧ ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡುವುದೇ ತಪ್ಪು ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು. 
 
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ ದಂಡ ಶುಲ್ಕ ಹೆಚ್ಚಳ ಪ್ರಶ್ನೆಗೆ ಉತ್ತರಿಸಿದ ಅವರು,ತಪ್ಪು ಮಾಡದೇ ಇರುವವರಿಗೆ  ದಂಡ ಕಟ್ಟುವ ಪ್ರಶ್ನೆ ಉದ್ಬವಿಸುವುದಿಲ್ಲ,ತಪ್ಪು ಮಾಡುವವರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಾರೆ.ಈ ಮೊದಲು ತಾವೂ ಸೀಟ್ ಬೆಲ್ಟ್ ಧರಿಸುತ್ತಿರಲಿಲ್ಲ.ಆದರೆ ದಂಡ ಶುಲ್ಕ ಹೆಚ್ಚಳವಾದ ಬಳಿಕ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕುತ್ತಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಹೊಸ  ಮೋಟಾರು ಕಾಯ್ದೆ ಜಾರಿಯನ್ನು ಸಮರ್ಥಿಸಿಕೊಂಡರು.
 
ಒಂದು ವೇಳೆ ತಾವು ತಪ್ಪು ಮಾಡಿದರೆ ಮೊದಲು ತಮಗೆ ದಂಡ ಹಾಕಬೇಕು.ಸಚಿವರೇ ಇರಲಿ,ಮುಖ್ಯಮಂತ್ರಿ ಅವರೇ ಇರಲಿ ಎಲ್ಲರಿಗೂ ದಂಡ ಹಾಕಬೇಕು.ದಂಡದ ಹಣದಲ್ಲಿ ರಸ್ತೆ ರಿಪೇರಿ  ಮಾಡಬೇಕೆಂಬ ಕೂಗು ಎದ್ದಿದೆ.ಈಗ ಕೂಗು ಎತ್ತಿರುವವರು ಮೊದಲು ದೇಶದಲ್ಲಿ ಎಷ್ಟು ಜನ  ತೆರಿಗೆ ಕಟ್ಟುತ್ತಿದ್ದರು ಎಂದು ಅವರು ಪ್ರಶ್ನಿಸಿದರು. 


ಅಮೆರಿಕಾದಲ್ಲಿ ಶೇ.97 ರಷ್ಟು ಜನ ತೆರಿಗೆ ಕಟ್ಟುತ್ತಾರೆ.ನಮ್ಮಲ್ಲಿ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ನೂರಾರು ಮಾರ್ಗಗಳನ್ನು ಹುಡುಕುತ್ತಾರೆ.ಆದರೂ ಅಮೆರಿಕಾದಂತಹ ರಸ್ತೆಗಳನ್ನು  ಬಯಸುತ್ತಾರೆ.ಮನಸ್ಥಿತಿ ಬದಲಾಗದ ಹೊರತು ಪರಿಸ್ಥಿತಿ ಬದಲಾಗಲ್ಲ ಎಂದು ಪ್ರವಾಸೋದ್ಯಮ  ಸಚಿವ ಸಿ.ಟಿ ರವಿ ನುಡಿದರು. 

SCROLL FOR NEXT