ರಾಜ್ಯ

ಕಲಬುರಗಿ: ಹಣಕ್ಕಾಗಿ ಗೆಳೆಯನನ್ನೇ ಕೊಂದ ಸ್ನೇಹಿತರು

Lingaraj Badiger

ಕಲಬುರಗಿ: ಹಣದ ವಿಚಾರವಾಗಿ ಸ್ನೇಹಿತರೇ ಗೆಳೆಯನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ನಗರದ ಅಫಜಲಪುರ ರಸ್ತೆಯ ಖರ್ಗೆ ಕಾಲೋನಿಯಲ್ಲಿ ಬುಧವಾರ ನಡೆದಿದೆ.

28 ವರ್ಷದ ಪ್ರಶಾಂತ್ ಕೊಟರಗಿ, ನಿನ್ನೆ ರಾತ್ರಿ ಸ್ನೇಹಿತರೊಡನೆ ಪಾರ್ಟಿ ಮಾಡಿ, ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಕಲಬುರಗಿ ನಗರದ ಐವಾನ್-ಎ-ಶಾಹಿ ಪ್ರದೇಶದ ನಿವಾಸಿ ಪ್ರಶಾಂತ್ ಮತ್ತು ಆತನ ಸ್ನೇಹಿತರು ನಿನ್ನೆ ರಾತ್ರಿ ನಗರದ ಬಿದ್ದಾಪುರ್ ಕಾಲೋನಿಯ ಬಾರ್‌ವೊಂದರಲ್ಲಿ ಕಂಠಪೂರ್ತಿ ಕುಡಿದಿದ್ದಾರೆ. ನಂತರ ಮತ್ತೊಂದು ಸುತ್ತು ಗುಂಡು ಪಾರ್ಟಿ‌ ಮಾಡುವುದಾಗಿ ನಿರ್ಧರಿಸಿ, ಸ್ನೇಹಿತನ ಹತ್ಯೆಗೆ ಸಂಚು ರೂಪಿಸಿದ್ದಾರೆ.

ನಂತರ ಪ್ರಶಾಂತ್‌ ಪೋಷಕರು ಬೆಂಗಳೂರಿನಲ್ಲಿರುವುದನ್ನು ಮನಗಂಡು, ಅದೇ ಬಾರ್‌ನಲ್ಲಿ ಮದ್ಯ ಖರೀದಿಸಿ, ಪ್ರಶಾಂತ್ ಮನೆಗೆ ತೆರಳಿದ್ದಾರೆ.

ಇದಕ್ಕೂ ಮುನ್ನ ಬಿದ್ದಾಪುರ ಕಾಲೋನಿಯಲ್ಲಿ ಮದ್ಯ ಸೇವಿಸಿದ ಸ್ನೇಹಿತರು ಅಲ್ಲೇ ಇದ್ದ ಎಳೆನೀರು ಅಂಗಡಿಯಲ್ಲಿನ ಮಚ್ಚನ್ನು ಜತೆಯಲ್ಲೆ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿ ಕಂಠಪೂರ್ತಿ ಕುಡಿದ‌ ನಂತರ ಹಣಕಾಸಿನ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳವಾಗಿದೆ. ಆಗ ಜಗಳ ವಿಕೋಪಕ್ಕೆ ತಿರುಗಿ, ಪ್ರಶಾಂತ್‌ನನ್ನು ಸ್ನೇಹಿತರೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಇಬ್ಬರೂ ಸ್ನೇಹಿತರು ಗ್ರಾಮೀಣ ಠಾಣೆಗೆ ತೆರಳಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಪ್ರಶಾಂತ್, ವ್ಯವಹಾರದ ಜೊತೆಗೆ ಸ್ಥಳೀಯ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ ಎಂದು ತಿಳಿದು ಬಂದಿದೆ.

SCROLL FOR NEXT