ಬೆಂಗಳೂರು: ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧಿಸುವಲ್ಲಿ ಹಿನ್ನೆಡೆ ಅನುಭವಿಸಿದರೂ, ವಿಜ್ಞಾನಿಗಳ ಸಾಹಸಕ್ಕೆ ಬೆಂಬಲವಾಗಿದ್ದ ಭಾರತೀಯರಿಗೆ ಇಸ್ರೋ ಧನ್ಯವಾದ ಸಲ್ಲಿಸಿದೆ.
ನಮ್ಮ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಧನ್ಯವಾದಗಳು. ಪ್ರಪಂಚದಾದ್ಯಂತ ಇರುವ ಭಾರತೀಯರ ಕನಸು, ಆಶಯಗಳಿಗೆ ಅನುಗುಣವಾಗಿ ನಾವು ಮುಂದಕ್ಕೆ ಹೋಗುತ್ತೇವೆ.
ಭಾನೆತ್ತರಕ್ಕೆ ಗುರಿ ಸಾಧಿಸಲು ಪ್ರೇರಣೆ ನೀಡಿದ್ದಕ್ಕೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ.
ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡ್ ಮಾಡಬೇಕಿದ್ದ ವಿಕ್ರಮ್ ಲ್ಯಾಂಡರ್, ಲ್ಯಾಂಡಿಂಗ್ ಗೂ ಕೇವಲ 400 ಮೀಟರ್ ದೂರದಲ್ಲಿ ಭೂಮಿಯೊಂದಿಗೆ ತನ್ನ ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಚಂದ್ರನ ಮೇಲೆ ವಾಲಿದ ರೀತಿ ಕಂಡು ಬಂದಿತ್ತು.
ಮತ್ತೆ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ಪ್ರಯತ್ನಿಸಿದರೂ ಯಶಸ್ವಿ ಸಿಗಲಿಲ್ಲ. ಆದರೆ, ಇಸ್ರೋ ವಿಜ್ಞಾನಿಗಳ ಚಂದ್ರಯಾನ-2 ಸಾಹಸಕ್ಕೆ ಇಡೀ ದೇಶ ಮಾತ್ರವಲ್ಲದೇ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.