ರಾಜ್ಯ

ಇವಿಎಂ ಬಗ್ಗೆ ಮತ್ತೆ ಸಂಶಯ ವ್ಯಕ್ತಪಡಿಸಿದ ಮಲ್ಲಿಕಾರ್ಜುನ್ ಖರ್ಗೆ: ಬ್ಯಾಲೆಟ್ ಪೇಪರ್ ಗೆ ಒತ್ತಾಯ

Srinivas Rao BV

ಬೆಂಗಳೂರು: ಇವಿಎಂ ಮತಯಂತ್ರದ ಬಗ್ಗೆ ಮತ್ತೆ ಸಂಶಯ ವ್ಯಕ್ತಪಡಿಸಿರುವ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಬೇರೆಬೇರೆ ರಾಜ್ಯಗಳ ಚುನಾವಣೆ ಜೊತೆಗೆ ಕರ್ನಾಟಕದಲ್ಲಿಯೂ ಉಪಚುನಾವಣೆ ಘೋಷಣೆಯಾಗಿದ್ದು, ಈ ಚುನಾವಣೆಯಲ್ಲಿ  ಬ್ಯಾಲೆಟ್ ಪೇಪರ್ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ವಿದ್ಯುನ್ಮಾನ ಮತಯಂತ್ರದ ಬಗ್ಗೆ ಅಭ್ಯರ್ಥಿಗಳು ಹಾಗೂ ಮತದಾರರಿಗೆ ಸಂಶಯ ಬಂದಿದೆ. ಅಂದಮೇಲೆ ಚುನಾವಣಾ ಆಯೋಗ ಇವಿಎಂ ಅನ್ನು ಬಲವಂತವಾಗಿ ಬಳಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಇವಿಎಂ ಯಂತ್ರವನ್ನು ಕೆಲವು ಆಯ್ದ ಕ್ಷೇತ್ರಗಳಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಕಲಬುರ್ಗಿಯಲ್ಲಿ ತಾವು ಪರಾಜಯಗೊಂಡಿದ್ದಕ್ಕಾಗಿ ಈ ಬಗ್ಗೆ ಆರೋಪಿಸುತ್ತಿಲ್ಲ.‌ಸಾಕ್ಷಿಸಹಿತ ಇವಿಎಂ ದುರ್ಬಳಕೆ ಸಾಬೀತಾಗಿದೆ. 1952 ರಿಂದ 2016 ರವರೆಗೂ ಗುರುಮಿಠ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತಾ ಬಂದಿತ್ತು. ಈ ಕ್ಷೇತ್ರದಲ್ಲಿ ಹೊರಗಿನಿಂದ ಬಂದು ಸ್ಪರ್ಧಿಸಿ ಗೆದ್ದವರು ಇದ್ದಾರೆ.ತಾವು ಶಾಸಕರಾಗಿದ್ದ ಕಾಲದಿಂದಲೂ ಗುರುಮಿಠ್ಕಲ್ ನಲ್ಲಿ ಕಾಂಗ್ರೆಸ್ ಪಕ್ಷವೇ ಇದೆ. ಗುರುಮಿಠ್ಕಲ್ ನಿಂದ ಚಿತ್ತಾಪುರಕ್ಕೆ ಬದಲಾವಣೆಗೊಂಡಾಗಲೂ ಪಕ್ಷ ಅಲ್ಲಿ ಗೆದ್ದಿತ್ತು. 

ಆದರೆ ಇಂತಹ ಕ್ಷೇತ್ರದಲ್ಲಿಯೇ ಬಿಜೆಪಿ ಗೆಲುವು ಸಾಧಿಸಿದೆ ಎನ್ನುವುದನ್ನು ನಂಬುವುದಾದರೂ ಹೇಗೆ? ಚುನಾವಣಾ ಆಯೋಗ ಹಾಗೂ ಮತಯಂತ್ರಗಳಲ್ಲಿ ಬಿಜೆಪಿ ವ್ಯವಸ್ಥಿತವಾಗಿ ಷಡ್ಯಂತ್ರ‌ ರೂಪಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

SCROLL FOR NEXT