ರಾಜ್ಯ

ಇಂದಿರಾ ಕ್ಯಾಂಟಿನ್ ನಲ್ಲಿ ಉಚಿತ ಊಟವಿಲ್ಲ: ಅಚ್ಚರಿ ಮೂಡಿಸಿದ ಸಿಎಂ ನಿರ್ಧಾರ

Shilpa D

ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ ನೀಡುವುದನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.ಆರ್ಥಿಕ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯೊಳಗೆ ಉಚಿತ ಊಟದ ಬದಲು ಹಿಂದೆ ಜಾರಿಯಲ್ಲಿದ್ದ ರಿಯಾಯಿತಿ ದರದಲ್ಲಿ ಊಟ–ಉಪಾಹಾರ ನೀಡಲು ಸರ್ಕಾರ ತೀರ್ಮಾನಿಸಿದೆ.

ಕೊರೊನಾ ಸೋಂಕು ಹರಡಲು ಆರಂಭಿಸಿದ ಮೇಲೆ ಹೋಟೆಲ್‌ಗಳನ್ನು ಬಂದ್ ಮಾಡಲಾಗಿತ್ತು. ಈ ಹೊತ್ತಿನಲ್ಲಿ ಬಡವರು ಊಟಕ್ಕೆ ಪರದಾಡುವುದನ್ನು ತಪ್ಪಿಸಲು ಕೆಲವು ಕಡೆಗಳಲ್ಲಿ ಉಚಿತವಾಗಿ ಊಟ ಪೂರೈಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತು. 

‘ಬಡವರಿಗೆ ಸರ್ಕಾರ ಹಲವು ಯೋಜನೆಗಳ ಮೂಲಕ ಹಣ, ಧಾನ್ಯ ನೀಡುತ್ತಿರುವುದರಿಂದ  ಶನಿವಾರದಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈ ಹಿಂದಿನ ವ್ಯವಸ್ಥೆಯೇ ಅಂದರೆ ಸಬ್ಸಿಡಿ ದರದಲ್ಲಿ ಊಟ ನೀಡುವ ನಿಯಮ ಜಾರಿಗೆ ಬರಲಿದೆ’ ಎಂದು ಸರ್ಕಾರ ತಿಳಿಸಿದೆ.

‘ಸುಮಾರು 15 ಲಕ್ಷ ಕಟ್ಟಡ/ಕೂಲಿ ಕಾರ್ಮಿಕರಿಗೆ ₹ 2 ಸಾವಿರ ಮೊತ್ತದ ನಗದು ಹಾಗೂ ಅಹಾರ ಮತ್ತು ನಾಗರಿಕ  ಸರಬರಾಜು ಇಲಾಖಾ ವತಿಯಿಂದ ಪ್ರತಿ ಕೂಲಿ ಕಾರ್ಮಿಕರು/ಬಡ ಕುಟುಂಬಗಳಿಗೆ 2 ತಿಂಗಳಿಗೆ ಸಾಕಾಗುವಷ್ಟು ಅಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈ ಹಿಂದಿನ ದರದಲ್ಲಿ ಆಹಾರ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ, ಆಹಾರದ ದುರ್ಬಳಕೆ ಆಗುವುದನ್ನು ತಪ್ಪಿಸುವ ಉದ್ದೇಶವೂ ಇದರ ಹಿಂದೆ ಇದೆ’ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

SCROLL FOR NEXT