ರಾಜ್ಯ

ಲಾಕ್ ಡೌನ್ ಎಫೆಕ್ಟ್: ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ ಹೂ ಬೆಳೆಗಾರರು

Sumana Upadhyaya

ತುಬಗೆರೆ(ದೊಡ್ಡಬಳ್ಳಾಪುರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸುತ್ತಮುತ್ತ ರೈತರ ಜಮೀನುಗಳಲ್ಲಿ ಬಗೆಬಗೆಯ ಬಣ್ಣಬಣ್ಣದ ಹೂವುಗಳು ಅರಳಿ ನಿಂತಿವೆ. ಆದರೆ ಇದು ಹೂ ಬೆಳೆಗಾರರಲ್ಲಿ ಖುಷಿಯನ್ನು ತಂದಿಲ್ಲ.

ಹೂ ಬೆಳೆಗಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳು ಫಲಬರಿತ ಮಾಸವಾಗಿ ಬಂಪರ್ ಬೆಲೆ ಸಿಗುವ ಸಮಯವಾಗಿದ್ದರೂ ಕೂಡ ರಾಷ್ಟ್ರವ್ಯಾಪಿ ಲಾಕ್ ಡೌನ್ ನಿಂದಾಗಿ ಪ್ರತಿನಿತ್ಯ ಇಲ್ಲಿನ ಹೂ ಬೆಳೆಗಾರರು ಸುಮಾರು 60 ಲಕ್ಷದಷ್ಟು ಹೂವುಗಳನ್ನು ಕಿತ್ತು ಎಸೆಯಬೇಕಾದ ಪರಿಸ್ಥಿತಿ ಬಂದಿದೆ.

ದಕ್ಷಿಣ ಭಾರತ ಹೂವಿನ ಸಂಘದ ನಿರ್ದೇಶಕ ಶ್ರೀಕಾಂತ್ ಬೊಳ್ಳಪಳ್ಳಿ, ಕಳೆದ ಒಂದು ತಿಂಗಳಿಂದ ಯಾವುದೇ ವ್ಯಾಪಾರ-ವಹಿವಾಟು ಇಲ್ಲದಿರುವುದರಿಂದ ಕನಿಷ್ಠ 100 ಕೋಟಿ ರೂಪಾಯಿ ಹೂಬೆಳೆ ನಷ್ಟವುಂಟಾಗಿರಬಹುದು. ತರಕಾರಿ ಮತ್ತು ಹಣ್ಣುಗಳಂತೆ ಹೂವುಗಳು ಅಗತ್ಯ ವಸ್ತು ಅಲ್ಲದಿರುವುದರಿಂದ ಈಗ ಹೂವುಗಳನ್ನು ಖರೀದಿಸುವವರು ಇಲ್ಲ. ಯಾವುದೇ ಸಭೆ, ಸಮಾರಂಭಗಳು, ಶುಭ ಕಾರ್ಯಗಳು ಇಲ್ಲದಿರುವುದರಿಂದ ಹೂ ಖರೀದಿಸುವವರು ಇಲ್ಲದೆ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ಆನೇಕಲ್, ದೇವನಹಳ್ಳಿ, ತುಮಕೂರಿನ ಕೆಲ ಭಾಗಗಳು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಡೀ ಕರ್ನಾಟಕದ ಶೇಕಡಾ 80ರಷ್ಟು ಹೂ ಬೆಳೆಗಾರರಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಅಲಂಕಾರಿಕ ಹೂವುಗಳನ್ನು ಬೆಳೆಯುತ್ತಾರೆ. ನರಸೇಗೌಡ ಎಂಬವರು ತಮ್ಮ ಒಂದು ಎಕರೆ ಪಾಲಿಹೌಸ್ ನಲ್ಲಿ ಕಳೆದ ಒಂದು-ಒಂದೂವರೆ ವರ್ಷದಿಂದ ಜರ್ಬೆರ ಬೆಳೆಯುತ್ತಾರೆ. ಇದಕ್ಕಾಗಿ 45 ಲಕ್ಷ ಹೂಡಿಕೆ ಮಾಡಿದ್ದಾರೆ. 6 ಮಂದಿ ಕೆಲಸಕ್ಕಿದ್ದಾರೆ. ಇದೀಗ ಹೂವು ಮಾರಾಟವಾಗದಿದ್ದರೆ ಎಲ್ಲಿಂದ ಹಣ ನೀಡುವುದು, ಕುಟುಂಬದಲ್ಲಿ 10 ಮಂದಿ ಇದ್ದೇವೆ. ಸರ್ಕಾರ ಅಕ್ಕಿ, ಗೋಧಿ ನೀಡುತ್ತದೆ, ಆದರೆ ಉಳಿದ ವಸ್ತು ಎಲ್ಲಿಂದ ತರುವುದು? ಅದೃಷ್ಟವಶಾತ್ ನಮ್ಮಲ್ಲಿ ಮೂರು ಹಸುಗಳಿವೆ,ಅದರಿಂದ ಬರುವ ಆದಾಯವನ್ನು ನಂಬಿಕೊಂಡಿದ್ದೇವೆ. ಹಾಲು ಮಾರಾಟದಿಂದ 15 ದಿನಕ್ಕೊಮ್ಮೆ 6,500 ರೂಪಾಯಿ ಬರುತ್ತದೆ ಎನ್ನುತ್ತಾರೆ.

SCROLL FOR NEXT