ರಾಜ್ಯ

ವಿದೇಶಗಳಿಗೆ ಹಣ್ಣು-ತರಕಾರಿ ರಫ್ತಿಗೆ ನಿರ್ಧಾರ: ರೈತರ ಮೊಗದಲ್ಲಿ ಭರವಸೆಯ ಬೆಳಕು

Shilpa D

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ  ತಾವು ಬೆಳೆದ ಬೆಳೆ ಮಾರಾಟವಾಗದ ಕಾರಣ ಹಣ್ಣು ತರಕಾರಿಗಳನ್ನು ಸುರಿಯಲು ನಿರ್ಧರಿಸಿದ್ದ ರೈತರ ಮೊಗದಲ್ಲೀಗ ಭರವಸೆಯ ಬೆಳಕು ಮೂಡಿದೆ. ವಿದೇಶಗಳಿಗೆ ಪ್ರತಿ ವಾರ ಸುಮಾರು 220 ಟನ್ ಹಣ್ಣು ಮತ್ತು ತರಕಾರಿಯನ್ನು ರಫ್ತು ಮಾಡುವುದಾಗಿ ತೋಟಗಾರಿಕಾ ಸಚಿವ ನಾರಾಯಣೌಡ ಹೇಳಿದ್ದಾರೆ. 

ತೋಟಗಾರಿಕೆ ಸಚಿವ ನಾರಾಯಣಗೌಡ ರಫ್ತುದಾರರು ಹಾಗೂ ಕೆಪೆಕ್, ಎಪೆಡಾ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದರು. ರಫ್ತಿಗೆ ಇರುವ ಸಮಸ್ಯೆಯ ಮಾಹಿತಿಯನ್ನು ಸಚಿವರು ಪಡೆದಿದ್ದರು. ಇಂದು ರಫ್ತು ದಾರರು, ಆಯಾ ದೇಶಗಳಲ್ಲಿನ ತರಕಾರಿ ಹಾಗೂ ಹಣ್ಣಿನ ಬೇಡಿಕೆಯ ಕುರಿತು ಮಾಹಿತಿ ಕಲೆ ಹಾಕಿ ಸಚಿವರಿಗೆ ನೀಡಿದ್ದಾರೆ.
 
ಈ ಮಾಹಿತಿಯನ್ನು ಪಡೆದು ಸಚಿವ ನಾರಾಯಣಗೌಡ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದಾರೆ. ಕಾರ್ಗೋ ದರ ಇಳಿಕೆ ಆಗಬೇಕು. ರಾಜ್ಯದ ಹಣ್ಣು, ತರಕಾರಿಗೆ
ಕಾರ್ಗೋದವರು ಆದ್ಯತೆ ನೀಡಬೇಕು ಎಂಬಿತ್ಯಾದಿ ವಿಚಾರದ ಬಗ್ಗೆ ಸಿಎಂ ಬಳಿ ಸಚಿವರು ಮಾತನಾಡಿದ್ದಾರೆ.ಸಿಎಂ ಮೂಲಕ ಕೇಂದ್ರ ವಿಮಾನಯಾನ ಸಚಿವರ ಜೊತೆ ಚರ್ಚಿಸಿ, ಒಂದೆರಡು ದಿನಗಳಲ್ಲಿ ರಫ್ತಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. 

ಬೇರೆ ಬೇರೆ ರಫ್ತುದಾರರಿಂದ ಪ್ರತಿವಾರ ಲಂಡನ್ ಗೆ 60 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ, ದೋಹಾ, ಖತಾರ್ ದುಬೈಗೆ ವಾರಕ್ಕೆ 89 ಮೆಟ್ರಿಕ್ ಟನ್, ಯುಎಸ್ಸೆ, ಕೆನಡಾಗೆ ವಾರಕ್ಕೆ 18 ಮೆಟ್ರಿಕ್ ಟನ್, ಆಸ್ಟ್ರೇಲಿಯಾಗೆ ವಾರಕ್ಕೆ 22.50 ಮೆಟ್ರಿಕ್ ಟನ್, ಮಾಲ್ಡೀವ್ಸ್ ಗೆ ವಾರಕ್ಕೆ 25 ಮೆಟ್ರಿಕ್ ಟನ್, ಇರಾನ್ ಗೆ ವಾರಕ್ಕೆ 5 ಮೆಟ್ರಿಕ್ ಟನ್, ಸಿಂಗಾಪುರ್ ಗೆ ವಾರಕ್ಕೆ 2 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ ರಫ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT