ರಾಜ್ಯ

ರಾಮನಗರ ಜೈಲು ಸಿಬ್ಬಂದಿಯ ಕ್ವಾರಂಟೈನ್: ಬಸವರಾಜ ಬೊಮ್ಮಾಯಿ

Nagaraja AB

ಬೆಂಗಳೂರು: ರಾಮನಗರದ ಜೈಲಿನಲ್ಲಿ ಪಾದರಾಯನಪುರ ಗಲಭೆಯ ಆರೋಪಿಗಳನ್ನು ಇರಿಸಿದ ಬಗ್ಗೆ ವಿಪಕ್ಷ ನಾಯಕರಿಂದ ತೀವ್ರ ವಿರೋಧ ಹಾಗೂ ರಾಮನಗರದಲ್ಲಿನ ಜನರ ಆಕ್ರೋಶಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದು ಹಿರಿಯ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು

ಸಭೆಯಲ್ಲಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹಿರಿಯ ಅಧಿಕಾರಿಗಳಾದ ಅಲೋಕ್ ಮೋಹನ್, ಪಂಕಜ ಕುಮಾರ್ ಪಾಂಡೆ, ರಜನೀಶ ಗೋಯಲ್ ಮತ್ತಿತರರು ಭಾಗಿಯಾಗಿದ್ದರು

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಮನಗರದಲ್ಲಿ ಐವರಿಗೆ ಪಾಸಿಟಿವ್ ಆಗಿದೆ. ಅವರನ್ನು ವಿಕ್ಟೋರಿಯಾಗೆ ಸ್ಥಳಾಂತರ ಮಾಡುತ್ತಿದ್ದೇವೆ. ಉಳಿದವರು ಹಜ್‌ ಭವನಕ್ಕೆ ಶಿಫ್ಟ್ ಆಗುತ್ತಾರೆ. ಜೈಲು ಸಿಬ್ಬಂದಿಗಳು ಕ್ವಾರೈಂಟೆನ್ ಆಗುತ್ತಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು

ರಾಮನಗರದ ಜೈಲಿನಲ್ಲಿದ್ದ ಆರೋಪಿಗಳನ್ನು ಪರೀಕ್ಷಿಸಲಾಗಿದ್ದು, ಮೊದಲು ಎರಡು, ನಂತರ ಮೂರು ಜನ ಪಾಸಿಟೀವ್ ಬಂದಿವೆ. ಪಾಸಿಟಿವ್ ಬಂದವರನ್ನು ವಿಕ್ಟೋರಿಯಾಗೆ ಹಾಗೂ‌ ಉಳಿದವರನ್ನು ಹಜ್ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ರಾಮನಗರ ಜೈಲು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಸಚಿವರು ತಿಳಿಸಿದರು

ಕಂಟೇನ್ಮೆಂಟ್ ಝೋನ್‌ಗಳಲ್ಲಿ ಹೆಚ್ಚಿನ ತಪಾಸಣೆಗೆ ನಿರ್ಧರಿಸಲಾಗಿದೆ.ಕೊರೊನಾ ಹೋರಾಟ ಈಗಾಗಲೇ ಬೇರೆ ಬೇರೆ ರೂಪ ತಾಳುತ್ತಿದೆ ಎಂದು ಮಾರ್ಮಿಕವಾಗಿ ನುಡಿದ ಗೃಹ ಸಚಿವರು, ಕಾನೂನು ಸುವ್ಯವಸ್ಥೆ‌ ಕಾಪಾಡಬೇಕು. ಗೃಹ ಇಲಾಖೆ ಯಡವಟ್ಟು ಎನ್ನುವುದನ್ನು ತಾವು ಒಪ್ಪುವುದಿಲ್ಲ. ಹೆಚ್ಚಿನ ಖೈದಿಗಳನ್ನು ಜೈಲಿನಲ್ಲಿ ಇಡಬಾರದು ಎಂದು ಸುಪ್ರೀಂ ಕೋರ್ಟ್‌ನ ಆದೇಶವೇ ಇದೆ ಎಂದರು.

SCROLL FOR NEXT