ರಾಜ್ಯ

ಆರೋಗ್ಯಾಧಿಕಾರಿಯ ಸಾವಿನ ವಿಚಾರವನ್ನು ಅನ್ಯ ಕಾರಣಗಳಿಗೆ ಬಳಸಬೇಡಿ: ಡಾ.ಕೆ.ಸುಧಾಕರ್ ಮನವಿ

Srinivasamurthy VN

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಕೊರೋನಾ ಸೇನಾನಿ ನಂಜನಗೂಡಿನ ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಅವರ ಕುಟುಂಬಕ್ಕೆ ನಮ್ಮ ಸರ್ಕಾರ ಕೂಡಲೇ 30 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ ಅವರ ಸಾವಿನ ವಿಚಾರವನ್ನು ಅನ್ಯ ಕಾರಣಗಳಿಗೆ ದುರ್ಬಳಕೆ ಮಾಡಬಾರದು ಎಂದು  ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

"ಆರೋಗ್ಯಾಧಿಕಾರಿ ನಾಗೇಂದ್ರ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಕೂಡ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಮೃತರ ಕುಟುಂಬದೊಂದಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ಆದರೆ ಅವರ ಸಾವಿನ ವಿಚಾರವನ್ನು ಬೇರೆ  ಕಾರಣಗಳಿಗೆ ಬಳಸಬಾರದು. ವೈದ್ಯಾಧಿಕಾರಿಗಳ ಸಂಘದೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ನಾಗೇಂದ್ರ ಅವರ ಸಾವಿನಲ್ಲಿ ಗೊಂದಲ ಸೃಷ್ಟಿ ಮಾಡುವುದು ಅಮಾನವೀಯವಾಗುತ್ತದೆ. ಘಟನೆ ಕುರಿತು ಮುಖ್ಯಮಂತ್ರಿಗಳೊಂದಿಗೆ  ಚರ್ಚಿಸಿ ನ್ಯಾಯ ದೊರಕಿಸಿಕೊಡಲಾಗುವುದು" ಎಂದು ಅವರು ತಿಳಿಸಿದ್ದಾರೆ.

 ತನಿಖೆಗೆ ಆದೇಶ
"ನಾಗೇಂದ್ರ ಅವರು ಜನಪರ, ಸಹೃದಯಿ ಹಾಗೂ ಬಹಳ ಸೂಕ್ಷ್ಮ ಮನಸ್ಸಿನವರು ಎಂದು ತಿಳಿಯಿತು. ಒಬ್ಬ ವೈದ್ಯನಾಗಿ ಅವರ ಸಾವಿನ ನೋವು ನನಗೂ ಅರ್ಥವಾಗುತ್ತದೆ. ಅವರ ಸಾವಿನ ತನಿಖೆಗೆ ಆದೇಶ ಮಾಡಿದ್ದು, ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ" ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

"ಕೊರೊನಾ ವಾರಿಯರ್ ಗಳ ಕಷ್ಟಕ್ಕೆ ಸರ್ಕಾರ ಸದಾ ಸ್ಪಂದಿಸುತ್ತದೆ. ವೈದ್ಯ ಸಿಬ್ಬಂದಿ ಕೆಲಸದ ಒತ್ತಡದಿಂದ ಮಾನಸಿಕ ಒತ್ತಡಕ್ಕೊಳಗಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ರಜೆ, ಒತ್ತಡ ಕಡಿಮೆ ಮಾಡಲು ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೊರೊನಾ ವಾರಿಯರ್ ಗಳಿಗೆ ಏನೇ  ಒತ್ತಡಗಳಿದ್ದರೂ ಮೇಲಧಿಕಾರಿಗಳ ಬಳಿ ಹೇಳಿಕೊಳ್ಳಬೇಕು" ಎಂದು ಸಚಿವರು ಕೋರಿದ್ದಾರೆ.

SCROLL FOR NEXT