ರಾಜ್ಯ

ಎಟಿಎಂ ಗಳಲ್ಲಿ 32 ಲಕ್ಷ ರು ಹಣ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Shilpa D

ಬೆಂಗಳೂರು: ಎಟಿಎಂ ಘಟಕದಲ್ಲಿ 32 ಲಕ್ಷ ರು. ಕಳವು ಮಾಡಿದ್ದ ಆರೋಪದಡಿ ಹಲಸೂರು ಗೇಟ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 

ಕಿರಣ್ ಹಾಗೂ ಅಶ್ವತ್ ಬಂಧಿತ ಆರೋಪಿಗಳು‌. ಗೌರಿಬಿದನೂರಿನ ಕಿರಣ, ಸಿಎಂಎಸ್ ಇನ್ಪೋ ಸಿಸ್ಟಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯಿಂದ ಹಣ ಪಡೆದುಕೊಂಡು ಎಟಿಎಂ ಘಟಕಗಳಿಗೆ ತುಂಬುವ  ಕೆಲಸ‌ ಮಾಡುತ್ತಿದ್ದ.

ಐಟಿಪಿಎಲ್ ರೋಡ್ ಹಾಗೂ ಹಲಸೂರು ಮಾರ್ಗದ ಎಟಿಎಂ ಘಟಕಗಳಲ್ಲಿ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಕಿರಣ್. ಇತ್ತೀಚೆಗೆ ತಾನು ಹೋಗುವ ರೂಟ್‌ಗೆ ಬೇರೊಬ್ಬರನ್ನು ನಿಯೋಜನೆ ಮಾಡಿತ್ತು ಕಂಪನಿ. ಇದೇ ತಿಂಗಳು ಇನ್ನೊಬ್ಬ ಕಸ್ಟೋಡಿಯನ್ ಆಗಿದ್ದ ಸೂರ್ಯ ಹಲಸೂರಿನ ಎರಡು ಬ್ಯಾಂಕ್ ಎಟಿಎಂ ಘಟಕಗಳಿಗೆ 12 ಲಕ್ಷ ತುಂಬಿಸಿದ್ದರು. 

ಹಣ ಹಾಕಿದ ಅರ್ಧ ಗಂಟೆಯಲ್ಲೇ ಆರೋಪಿ ಕಿರಣ್ ಎಟಿಎಂಗಳಿಗೆ ಹೋಗಿ 32.28 ರು.ಲಕ್ಷ ಹಣ ಎಗರಿಸಿದ್ದ. ಎಟಿಎಂಗಳ ಪಾಸ್ ವರ್ಡ್ ಅರಿತಿದ್ದ ಕಿರಣ್. ಕೃತ್ಯಕ್ಕೆ ಮತ್ತೊಬ್ಬ ಆರೋಪಿ ಅಶ್ವತ್ ಕೈ ಜೋಡಿಸಿದ್ದ. ಹಣ ಕಳವು ಸಂಬಂಧ ಕಂಪೆನಿಯು ಹಲಸೂರು ಠಾಣೆಗೆ ದೂರು ನೀಡಿತ್ತು. 

ಸಿಸಿಟಿವಿ ಸೆರೆಯಾದ ದೃಶ್ಯಾವಳಿ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು. ಹಣ ಕದ್ದು ಯಾರಿಗೂ ಅನುಮಾನ ಬಾರದಂತೆ ನಟಿಸಿದ್ದ. ಪೊಲೀಸ್ ವಿಚಾರಣೆಯಲ್ಲಿ ಕೃತ್ಯದ ಬಗ್ಗೆ ಗೊತ್ತೇ ಇಲ್ಲ ಅಂದಿದ್ದ ಕಿರಣ್. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿಯ ನಡೆಯುವ ಶೈಲಿ ಹಾಗೂ ಕಿರಣ್ ನಡೆಯುವ ಸ್ಟೈಲ್ ತಾಳೆ ಹಾಕಿದ ಪೊಲೀಸರು ಅನುಮಾನದಿಂದ ತ್ರೀವ ವಿಚಾರಣೆಗೊಳಪಡಿಸಿದಾಗ ಕೃತ್ಯ ಎಸಗಿರುವುದಾಗಿ ಕಳ್ಳರು ತಪ್ಪೊಪ್ಪಿಕೊಂಡಿದ್ದಾರೆ.

SCROLL FOR NEXT