ರಾಜ್ಯ

ರಾಜ್ಯವನ್ನು ನಂ.1 ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ಗುರಿಯತ್ತ ಧೃಢ ಹೆಜ್ಜೆ- ಜಗದೀಶ್ ಶೆಟ್ಟರ್ 

Nagaraja AB

ಬೆಂಗಳೂರು: ರಾಜ್ಯವನ್ನು ನಂ.1 ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ಗುರಿಯತ್ತ ಧೃಢ ಹೆಜ್ಜೆ ಇಟ್ಟಿರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಕೈಗಾರಿಕಾ ಅಭಿವೃದ್ಧಿಯ ಒಂದು ವರ್ಷದ ಸಾಧನೆಗಳ ಕುರಿತ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಅನಾವರಣಗೊಳಿಸಿದ ನಂತರ ವಿಧಾನಸೌಧದಲ್ಲಿ   ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್‌, ರಾಜ್ಯವನ್ನು ಕೈಗಾರಿಕೆ ಹಾಗೂ ಹೂಡಿಕೆದಾರರ ಸ್ನೇಹಿ ಸ್ಥಾನದಲ್ಲಿ ದೇಶದಲ್ಲಿ ನಂ.1  ಸ್ಥಾನ ಪಡೆಯುವ ಗುರಿ ನಮ್ಮದು. 2-3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವುದರ ಮೂಲಕ ರಾಜ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಹಂಚಿಕೆ ಮಾಡಲಾಗುವ ಭೂಮಿಯ ದರದ ಬಗ್ಗೆ ವೈಜ್ಞಾನಿಕ ನೀತಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾಭಿವೃದ್ದಿ ಮಂಡಳಿಯ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡಿರುವ ಭೂ ಮಾಲೀಕರುಗಳಿಗೆ ಪರಿಹಾರ ನೀಡಲು ಕಾಲಮಿತಿಯ ಮಾರ್ಗಸೂಚಿ ರೂಪಿಸಲಾಗುವುದು ಎಂದರು.

ಕೊರೋನಾ ಲಾಕ್‌ಡೌನ್‌ ಸಂಧರ್ಭದಲ್ಲಿ ರಾಜ್ಯದಲ್ಲಿ 31,676.57 ಕೋಟಿ ರೂಪಾಯಿ  ಹೂಡಿಕೆ ಮಾಡಲು ವಿವಿಧ ಕಂಪನಿಗಳು ಮುಂದಾಗಿವೆ. ಇದರಿಂದಾಗಿ  65,459 ಉದ್ಯೋಗ ಸೃಷ್ಟಿಯಾಗಲಿವೆ. ರಾಜ್ಯದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವಂತೆ ತಂದಿರುವ ಹೊಸ ಕೈಗಾರಿಕಾ ನೀತಿ ಹಾಗೂ ಕ್ರಮಗಳಿಂದಾಗಿ ಬಂಡವಾಳ ಹೂಡಿಕೆ ಇಷ್ಟು ಪ್ರಮಾಣದಲ್ಲಿ ಬಂದಿದೆ ಎಂದು ಅವರು ತಿಳಿಸಿದರು.

ಕೋಲಾರದ 'ಭಾರತ್ ಗೋಲ್ಡ್‌ ಮೈನ್ಸ್ ಲಿಮಿಟೆಡ್‌'(ಬಿಜಿಎಂಎಲ್‌)ನಲ್ಲಿ ಬಳಕೆ ಆಗದೇ ಉಳಿದಿರುವ 3,200 ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಬಿಟ್ಟುಕೊಡುವಂತೆ ರಾಜ್ಯ ಮಾಡಿರುವ ಮನವಿಗೆ ಕೇಂದ್ರ ಸ್ಪಂದಿಸಿದ್ದು, ಇದರಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣ ಉದ್ದಿಮೆ ಸ್ಥಾಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

"ಉದ್ದೇಶಿತ ಕೈಗಾರಿಕಾ ಪಾರ್ಕ್‌ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 90 ಕಿ.ಮೀ. ಚೆನ್ನೈ ಬಂದರಿನಿಂದ 260 ಕಿ.ಮೀ. ಕೃಷ್ಣಪಟ್ಟಣಂ ಬಂದರಿನಿಂದ 314 ಕಿ.ಮೀ ದೂರದಲ್ಲಿರುವ ಈ ಪ್ರದೇಶ ಕೈಗಾರಿಕೆ ಸ್ಥಾಪನೆಗೆ ಸೂಕ್ತವಾಗಿದ್ದು. ಅಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

SCROLL FOR NEXT