ರಾಜ್ಯ

ಶಿವರಾಮ ಕಾರಂತ್ ಲೇಔಟ್ ನಿವಾಸಿಗಳ ಹಿತಾಸಕ್ತಿ ಕಾಪಾಡಿದ ಸುಪ್ರೀಂ ಕೋರ್ಟ್!

Srinivas Rao BV

ನವದೆಹಲಿ: 650 ಎಕರೆ ಪ್ರದೇಶದಲ್ಲಿ ಬಿಡಿಎ ಗುರುತಿಸಿದ ಡಾ. ಕೆ ಶಿವರಾಮ ಕಾರಂತ್ ಲೇಔಟ್ ನಲ್ಲಿ ನಿರ್ಮಿಸಲಾಗಿರುವ ಮನೆಗಳ ಮಾಲಿಕರಿಗೆ ಸುಪ್ರೀಂ ಕೋರ್ಟ್ ಆದೇಶದಿಂದ ರಿಲೀಫ್ ದೊರೆತಿದೆ. 

ಲೇಔಟ್ ನಲ್ಲಿ ಕಾನೂನುಬದ್ಧವಾಗಿ ನಿರ್ಮಾಣ ಮಾಡಲಾಗಿರುವ ಮನೆಗಳನ್ನು ತೆರವುಗೊಳಿಸುವುದರ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನ ನ್ಯಾ. ಅಬ್ದುಲ್ ನಜೀರ್ ಹಾಗೂ ನ್ಯಾ. ಸಂಜೀವ್ ಖನ್ನಾ ಅವರಿದ್ದ ಪೀಠ ಆದೇಶ ನೀಡಿದ್ದು, ವಾಸಯೋಗ್ಯ ಮನೆಗಳನ್ನು ಧ್ವಂಸಗೊಳಿಸುವುದರ ವಿರುದ್ಧದ ತನ್ನ ಆದೇಶ ಸಮರ್ಥನೀಯವಾದದ್ದು ಎಂದು ಹೇಳಿದೆ.

ಈ ಲೇಔಟ್ ವಸತಿ ಸೈಟ್ ಗಳಿಗಾಗಿಯೇ ಇದ್ದು, ಕಾನೂನು ಬದ್ಧವಾಗಿ ನಿರ್ಮಾಣವಾಗಿರುವ ಬಡ-ಮಧ್ಯಮವರ್ಗದವರ ಮನೆಗಳನ್ನು ಉಳಿಸುವ ಆದೇಶ ಲೇಔಟ್ ನಿರ್ಮಾಣದ ಆಶಯಕ್ಕೆ ವಿರುದ್ಧವಾಗಿರುವುದಿಲ್ಲ ಎಂದು ಕೋರ್ಟ್ ಹೇಳಿದೆ.

3,546 ಎಕರೆ ಹಾಗೂ 12 ಗುಂಟೆಗಳ ಪ್ರದೇಶದಲ್ಲಿ 2008 ರಲ್ಲಿ ಪ್ರಸ್ತಾವನೆ ನೀಡಲಾಗಿದ್ದ ಶಿವರಾಮ ಕಾರಂತ ಲೇಔಟ್, ಕೆಂಪೇಗೌಡ ಲೇಔಟ್ ನಂತರ ಬಿಡಿಎಗೆ ಸೇರಿದ್ದ ಎರಡನೇ ಅತಿ ದೊಡ್ಡ ಲೇಔಟ್ ಆಗಿತ್ತು. ದೊಡ್ಡಬಳ್ಳಾಪುರ-ಹೆಸರಾಟ್ಟದ 17 ಗ್ರಾಮಗಳ ನಡುವೆ 18,957 ಸೈಟ್ ಗಳನ್ನು ನಿರ್ಮಾಣ ಮಾಡಲಾಗಿತ್ತು. 

ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಬಿಡಿಎ ಪ್ರಾಥಮಿಕ ಹಂತಹದ ಅಧಿಸೂಚನೆ ಹೊರಡಿಸಿದ ನಂತರ ಕಾನೂನು ವ್ಯಾಜ್ಯಗಳು ಪ್ರಾರಂಭವಾಗಿ ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರಲಿಲ್ಲ.

ಭೂ ಮಾಲಿಕರಿಂದ ಅಸಂಖ್ಯ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ 2015 ರ ಸೆ.2 ರಂದು ಶಿವರಾಮ ಕಾರಂತ್ ಲೇಔಟ್ ಯೋಜನೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಬಿಡಿಎ ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು. 2018 ರ ಆ.3 ರಂದು ಸುಪ್ರೀಂ ಕೋರ್ಟ್ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿತ್ತು.

ಅಷ್ಟೇ ಅಲ್ಲದೇ ಅಧಿಸೂಚನೆ ಹೊರಡಿಸಿದ್ದ ಭೂ ಪ್ರದೇಶದಲ್ಲಿ ಕಾನೂನುಬದ್ಧವಾಗಿ ನಿರ್ಮಾಣಗೊಂಡಿರುವ ಮನೆಗಳನ್ನು ಗುರುತಿಸುವುದಕ್ಕಾಗಿ ಕೋರ್ಟ್ ಸಮಿತಿಯನ್ನೂ ನೇಮಕ ಮಾಡಿದೆ. ಆರು ತಿಂಗಳಲ್ಲಿ ಸಮಿತಿಯ ವರದಿ ಕೋರ್ಟ್ ಗೆ ಸಲ್ಲಿಕೆಯಾಗಬೇಕಿದೆ. ಬಿಡಿಎಗೆ 6 ಮಂದಿ ಹೆಚ್ಚುವರಿ ಭೂ ಸ್ವಾಧೀನ ಅಧಿಕಾರಿಗಳನ್ನು 2 ವಾರಗಳಲ್ಲಿ ನೇಮಕ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದು, ಜ.11 ರ ವೇಳೆಗೆ ಸ್ಥಿತಿ ವರದಿಯನ್ನು ಸಲ್ಲಿಸುವುದಕ್ಕೆ ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ.

SCROLL FOR NEXT