ರಾಜ್ಯ

ಕೋಲಾರ: ಐಫೋನ್ ತಯಾರಿಕಾ ಘಟಕದ ಅಧಿಕಾರಿಗಳಿಗೆ ಕಾರ್ಮಿಕ ಇಲಾಖೆಯಿಂದ ನೋಟಿಸ್ ಜಾರಿ

Manjula VN

ಬೆಂಗಳೂರು: ನರಸಾಪುರದ ಸಮೀಪದ ವಿಸ್ಟ್ರಾನ್ ಘಟಕದ ಮೇಲೆ ನಡೆದ ದಾಳಿ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿರುವ ಕಾರ್ಮಿಕ ಇಲಾಖೆಯು, ಈ ಸಂಬಂಧ ಐಫೋನ್ ತಯಾರಿಕಾ ಘಟಕದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. 

ಕಂಪನಿಯ ಕೆಲವು ಅಧಿಕಾರಿಗಳು ಹಾಗೂ 6 ಮಂದಿ ಕಾರ್ಮಿಕ ಗುತ್ತಿಗೆದಾರರಿಗೆ ಕಾರ್ಮಿಕ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಗಳು ತಿಳಿಸಿವೆ. 

ದಾಂಧಲೆ ಘಟನೆಯನ್ನು ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಮ್ ಪಾಷ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. 

ವೇತನ ಪಾವತಿ, ಕೆಲಸದ ಅವಧಿ ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆಗಳಾಗಿವೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಕ್ರಮ್ ಪಾಷ ಅವರು ಹೇಳಿದ್ದಾರೆ. 

ಈಗಾಗಲೇ ವಿಸ್ಟ್ರಾನ್ ಕಂಪನಿಯ ಅಧಿಕಾರಿಗಳಿಂದ ಕಡತಗಳನ್ನು ಕೇಳಲಾಗಿತ್ತು, ಈ ಕಡತಗಳು ಕೈ ಸೇರಿದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ನೌಕರರಲ್ಲಿ ಯಾವ ವಿಚಾರಕ್ಕೆ ಅಸಮಾಧಾನಗಳು ಮೂಡಿವೆ ಎಂಬುದರ ಕುರಿತು ಯಾವುದೇ ಸುಳಿವುಗಳು ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಈ ನಡುವೆ ಕಂಪನಿಯು ದೂರಿನಲ್ಲಿ ರೂ.437 ಕೋಟಿ ನಷ್ಟವಾಗಿರುವುದಾಗಿ ಹೇಳಿಕೊಂಡಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ನಷ್ಟವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಪಾಷಾ ಅವರು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ. 

ಕಂಪನಿಯಲ್ಲಿ ಕಾರ್ಮಿಕ ಸಂಘಟನೆ ಇಲ್ಲದ ಕಾರಣ ಈ ವರೆಗೂ ಕಾರ್ಮಿಕರಿಂದ ಯಾವುದೇ ದೂರುಗಳು ಬಂದಿರಲಿಲ್ಲ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

ಸೆಪ್ಟೆಂಬರ್ ತಿಂಗಳಿನಿಂದಷ್ಟೇ ಐಫೋನ್ ಘಟಕ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಘಟೆ ಸಂಬಂಧ ಇದೀಗ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಂಪನಿಯಲ್ಲಿ 1,343 ಮಂದಿ ಖಾಯಂ ನೌಕರರಿದ್ದು, 8,490 ಮಂದಿ ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಗುತ್ತಿಗೆ ಕಾರ್ಮಿಕರೇ ಈ ದಾಂಧಲೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. 

ಕಳೆದ 2-3 ತಿಂಗಳುಗಳಿಂದ ನೌಕರರಿಗೆ ಸಂಬಳ ನೀಡಲಾಗಿಲ್ಲ ಎಂಬ ಆರೋಪವು ಆಧಾರರಹಿತವಾಗಿದ್ದರೂ, ಕೆಲವರಲ್ಲಿ ಮಾಡಿದ ದಿನಗಳಿಗೆ ಸಂಬಳವನ್ನು ನೀಡಿಲ್ಲ ಎಂಬ ಅಸಮಾಧಾನಗಳೂ ಮೂಡಿವೆ. ಇನ್ನೂ ಕೆಲವರಲ್ಲಿ ನುರಿತ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಒಂದೇ ರೀತಿಯ ವೇತನವನ್ನು ನೀಡಲಾಗುತ್ತಿದೆ ಮತ್ತು ಅವರ ಸೇವೆಗಳನ್ನು ಕ್ರಮಬದ್ಧಗೊಳಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿವೆ. ವಿಸ್ಟ್ರಾನ್ ನೌಕರರು ಟೊಯೋಟಾ ಘಟಕದಂತೆಯೇ ಮುಷ್ಕರವನ್ನು ನಡೆಸಬಹುದು ಎಂದು ಈ ದಾಳಿ ನಡೆಸಿರುವುದ ಆಘಾತವನ್ನು ತಂದಿದೆ ಎಂದು  ಪಾಷಾ ಹೇಳಿದ್ದಾರೆ. 

ಈ ನಡುವೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಲು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಹೆಬ್ಬಾರ್ ಅವರು ಗ್ರಾಮ ಪಂಚಾಯತಿ ಚುನಾವಣೆ ಸಿದ್ದತೆಯಲ್ಲಿ ಬಿಝಿಯಾಗಿದ್ದಾರೆಂದು ತಿಳಿದುಬಂದಿದೆ. 

ಇನ್ನು ಘಟನೆ ನಡೆದ ಎರಡು ದಿನಗಳ ಬಳಿಕ ಐಫೋನ್ ತಯಾರಿಕಾ ಘಟಕ ಮರಳಿ ತನ್ನ ಕಾರ್ಯವನ್ನು ಆರಂಭಿಸಿದೆ. ನೌಕರರ ಮೊಬೈಲ್'ಗಳಿಗೆ ಸಂದೇಶ ರವಾನಿಸಿರುವ ಕಂಪನಿಯು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. 

SCROLL FOR NEXT