ರಾಜ್ಯ

ವಿಸ್ಟ್ರಾನ್ ಘಟಕ ಧ್ವಂಸ ಪ್ರಕರಣ: ಸ್ಥಳದ ಅಭಾವ ಕಾರಣ ಬಂಧಿತರನ್ನು ಪ್ರತ್ಯೇಕ ಕಾರಾಗೃಹಗಳಿಗೆ ರವಾನೆ

Manjula VN

ಕೋಲಾರ: ನರಸಾಪುರದ ಸಮೀಪದ ವಿಸ್ಟ್ರಾನ್ ಘಟಕದ ಮೇಲೆ ನಡೆದ ದಾಳಿಯ ಕೃತ್ಯದಲ್ಲಿ ಪೊಲೀಸರು 149 ಮಂದಿಯನ್ನು ಬಂಧನಕ್ಕೊಳಪಡಿಸಿದ್ದು, ಬಂಧಿತರನ್ನು ಪ್ರತ್ಯೇಕ ಜೈಲುಗಳಿಗೆ ರವಾನಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. 

ಕೋಲಾರ ಜೈಲಿನಲ್ಲಿ ಸ್ಥಳದ ಕೊರತೆ ಇರುವ ಹಿನ್ನೆಲೆಯಲ್ಲಿ ಬಂಧಿತರನ್ನು ವಿವಿಧ ಜೈಲುಗಳಿಗೆ ರವಾನೆ ಮಾಡಲಾಗುತ್ತಿದೆ ಎನ್ನಲಾಗಿದೆ. 

ಚಿತ್ರದುರ್ಗ, ಚಿಂತಾಮಣಿ ಮತ್ತು ಕೆಜಿಎಫ್ ಜೈಲುಗಳಿಗೆ ಆರೋಪಿಗಳನ್ನು ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಬೆಂಗಳೂರು ಕಾರಾಗೃಹದ ಹಿರಿಯ ಅಧಿಕಾರಿಗಳು ಕೋಲಾರ ಜೈಲು  ಅಧಿಕಾರಿಗಳಿಗೆ ನೀಡಿರುವ ಸೂಚನೆಗಳ ಮೇರೆಗೆ ಆರೋಪಿಗಳನ್ನು ವಿವಿಧ ಕಾರಾಗೃಹಗಳಿಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿಯವರು ಪ್ರತಿಕ್ರಿಯೆ ನೀಡಿ, ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಕೃತ್ಯಗಳಿಗೆ ಸಂಬಂಧಿಸಿದಂತೆ ಈಗಾಗಲೇ 149 ಮಂದಿಯನ್ನು ಬಂಧಿಸಲಾಗಿದೆ. ಸಿಸಿಟಿವಿ ಮತ್ತು ವಾಟ್ಸಪ್'ಗಳಲ್ಲಿ ಹಿಂಸಾಚಾರದಲ್ಲಿ ತೊಡಗಿದವರನ್ನು ಗುರುತಿಸಿ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಯಾವುದೇ ಸಾಕ್ಷ್ಯಾಧಾರಗಳು ಸಿಗದ 25 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಕೆಲವರ ಬಂಧನ ಆಗಬೇಕಾಗಿದೆ ಎಂದು ಹೇಳಿದ್ದಾರೆ. 

ಘಟನೆ ಸಂಬಂಧ ಈವರೆಗೂ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸಂಸ್ಥೆಯ ಪ್ರತಿನಿಧಿಗಳು ಮೂರು ದೂರುಗಳನ್ನು ನೀಡಿದ್ದು, ಪೊಲೀಸರು ಒಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಒಂದು ಎಫ್ಐಆರ್ ನಲ್ಲಿ ಕೆಲ ದರೋಡೆಕೋರರು ಘಟನೆ ಸಂಭವಿಸಿದ ಸಂದರ್ಭದಲ್ಲಿ ಬೆಲೆಬಾಳುವ ಲ್ಯಾಪ್'ಟಾಪ್, ಮೊಬೈಲ್ ಫೋನ್ ಹಾಗೂ ಇತರೆ ಗ್ಯಾಡ್ಜೆಟ್ ಗಳನ್ನು ಹೊತ್ತಿಯ್ದಿರುವುದು ವಿಡಿಯೋಗಳಲ್ಲಿ ಕಂಡು ಬಂದಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಘಟನೆ ವೇಳೆ ಲೂಟಿ ಹಾಗೂ ದರೋಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT