ರಾಜ್ಯ

ರೈತರು, ಕಾರ್ಮಿಕರ ಪ್ರತಿಭಟನೆ: ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಆಗ್ರಹ

Manjula VN

ಬೆಂಗಳೂರು: ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಚಳವಳಿ, ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನೆಯಲ್ಲಿ‌ ನಿರತರಾಗಿರುವ ರೈತರು, ಕಾರ್ಮಿಕರನ್ನು‌ ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಕಾರು ತಯಾರಿಸುವ ಬಿಡದಿಯ ಟೊಯೋಟಾ ಕಂಪನಿ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಘಟಕಗಳನ್ನು ಹೊಂದಿದೆ. ಅದರ ಒಂದು ಘಟಕದಲ್ಲಿ ಸುಮಾರು ಎರಡು ಸಾವಿರ ಜನ ಖಾಯಂ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಕಾರು ಉತ್ಪಾದನಾ ಘಟಕವನ್ನು ಲಾಕೌಟ್ ಮಾಡಲಾಗಿದೆ. ಸುಸೂತ್ರವಾಗಿ ನಡೆಯುತ್ತಿದ್ದ ಈ ಘಟಕ ಕೇಂದ್ರವು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದ ಕೂಡಲೇ ಅದನ್ನು ನೆಪವಾಗಿಟ್ಟುಕೊಂಡು ‘ನಿರ್ದಿಷ್ಟ ಕಾಲಾವಧಿಯ ಕಾರ್ಮಿಕರನ್ನು’ (ಹೊಸ ಕಾಯ್ದೆಯಲ್ಲಿ ನಿರ್ದಿಷ್ಟ ಸೇವಾವಧಿಯ ಕಾರ್ಮಿಕರನ್ನು ನೇಮಿಸಿಕೊಳ್ಳುವ ಅವಕಾಶ ಮಾಡಲಾಗಿದೆ) ನೇಮಿಸಿಕೊಂಡು ಹೆಚ್ಚು ಲಾಭ ಗಳಿಸಬಹುದು ಎನ್ನುವ ಉದ್ದೇಶದಿಂದ ವಿಪರೀತ ಕಿರುಕುಳ ನೀಡುತ್ತಿವೆ ಎನ್ನುವುದು ಕಾರ್ಮಿಕರ ಆರೋಪ. ಶೋಷಣೆಯನ್ನು ಪ್ರಶ್ನಿಸಿದ ನೌಕರರನ್ನು ಕಂಪನಿ ಅಮಾನತ್ತು ಮಾಡಿದೆ. 

ಪ್ರತಿಭಟನೆಗೆ ಕೂತರೆ ಕಂಪನಿಗಳು ಕ್ಯಾರೆ ಎನ್ನುತ್ತಿಲ್ಲ. ಬದಲಾಗಿ ಲಾಕೌಟ್ ಮಾಡಿವೆ. ಕಂಪನಿಯ ಮುಂದೆ ಖಾಲಿ ಇದ್ದ ಜಾಗದಲ್ಲಿ ಪ್ರತಿಭಟನೆ ಮಾಡುವುದಕ್ಕಾಗಿ ಹಾಕಿದ್ದ ಶಾಮಿಯಾನವನ್ನು ತೆರವುಗೊಳಿಸಲು ಸರ್ಕಾರ ಕೆಐಎಡಿಬಿ ಮೇಲೆ ಒತ್ತಡ ತಂದಿದೆ. ಕೆಐಡಿಬಿಯು ಆ ಜಾಗದ ಮಾಲೀಕರಿಗೆ ನೋಟಿಸ್ ನೀಡಿ ಶಾಮಿಯಾನವನ್ನು ತೆರವುಗೊಳಿಸಿದೆ. ಕಾರ್ಮಿಕರು ಈಗ ಛತ್ರಿಗಳನ್ನಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕಾರ್ಮಿಕರ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟರೂ ಇದುವರೆಗೂ ಕಂಪನಿಯು ಲಾಕೌಟ್ ತೆರವುಗೊಳಿಸಿ ಮಾತುಕತೆಗೆ ಮುಂದಾಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

SCROLL FOR NEXT