ರಾಜ್ಯ

ಶಿವರಾತ್ರಿ ಹಬ್ಬದಂದು 3 ಸಾವಿರ ದೇವಸ್ಥಾನಗಳಿಗೆ 40 ಸಾವಿರ ಲೀಟರ್ ಗಂಗಾಜಲ ವಿತರಣೆ

Lingaraj Badiger

ಬೆಂಗಳೂರು: ಮಹಾ ಶಿವರಾತ್ರಿಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಫೆ. 21 ರಂದು ರಾಜ್ಯದ ಎಲ್ಲಾ ಶಿವನ ದೇವಾಲಯಗಳಲ್ಲಿ ಗಂಗಾಜಲ ವಿತರಣೆಗೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ.

ಹನುಮಂತನಗರದ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಹರ್ಷಿ ಆನಂದ್ ಗುರೂಜಿ ಗಂಗಾಜಲ ಹೊತ್ತ ವಾಹನಗಳಿಗೆ ಗಂಗಾ ಪೂಜೆಮಾಡುವ ಮೂಲಕ ವಿಧ್ಯುಕ್ತವಾಗಿ ಬೀಳ್ಕೊಟ್ಟರು.

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ 12ನೇ ವರ್ಷದ ಕಾರ್ಯಕ್ರಮದಡಿ 40 ಸಾವಿರ ಲೀಟರ್ ಪವಿತ್ರ ಗಂಗಾಜಲವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಮುಜರಾಯಿದೇವಸ್ಥಾನಗಳಿಗೆ ವಿತರಣೆ ಮಾಡಲಾಗುತ್ತಿದೆ. ರಾಜ್ಯದ ಪ್ರಮುಖ 3 ಸಾವಿರ ಪುರಾತನ ಈಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿಯಂದು ಆಗಮಿಸುವ ಭಕ್ತಾಧಿಗಳಿಗೆ ಗಂಗಾಜಲ ವಿತರಿಸಲಾಗುತ್ತಿದೆ. 
ಹತ್ತು ಲೀಟರ್ ಗಂಗಾಜಲ ಹೊಂದಿರುವ ಎರಡು ಸಾವಿರ ಕ್ಯಾನ್ ಗಳು ಮತ್ತು ಸುಮಾರು 1.25 ಲಕ್ಷ ಸಣ್ಣ ಸಣ್ಣ ಬಾಟೆಲ್ ಗಳಲ್ಲಿ ಗಂಗಾಜಲ ತುಂಬಿ ದೇವಸ್ಥಾನಗಳಿಗೆ ಹಸ್ತಾಂತರ ಮಾಡಲಾಗತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಯ್ಯ ಶೆಟ್ಟಿ, ಇಲ್ಲಿಂದ ಹೊರಡುವ ವಾಹನಗಳು ನೇರವಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪುತ್ತವೆ. ಅಲ್ಲಿಂದ ಮುಜರಾಯಿ ದೇವಸ್ಥಾನಗಳಿಗೆ ಗಂಗಾಜಕಲ ವಿತರಣೆಯಾಗಲಿದೆ.
ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಹರಿದ್ವಾರದ ಬ್ರಹ್ಮ ಕುಂಡ ಬಳಿಯಿಂದ ಗಂಗಾ ಜಲ ತರಲಾಗಿದೆ. 30 ರಿಂದ 40 ಜನರ ತಂಡ ಗಂಗಾ ಜಲವನ್ನು ಟ್ಯಾಂಕರ್ ಗಳ ಮೂಲಕ ತಂದಿದೆ. ಮೂರು ದಿನಗಳ ಪ್ರಯಾಣದ ನಂತರ ಗಂಗಾಜಲ ಹರಿದ್ವಾರದಿಂದ ನಗರಕ್ಕೆ ಬಂದಿದೆ. ಇದಕ್ಕಾಗಿ ಕಳೆದ ಹತ್ತು ದಿನಗಳಿಂದ ತಯಾರಿ ನಡೆಯುತ್ತಿದೆ ಎಂದರು.

ತಾವು ಮಂತ್ರಿಯಾಗಿದ್ದಾಗ 12 ವರ್ಷಗಳ ಹಿಂದೆ ಆರಂಭಿಸಿದ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಗಂಗಾಜಲ ಶಿವನಿಗೆ ಪ್ರಿಯವಾಗಿದ್ದು, ಇದರಿಂದ ನಾಡಿನ ಜನರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಈ ಕಾರ್ಯಕ್ರಮವನ್ನುಯಶಸ್ವಿಯಾಗಿ ನಡೆಸುತ್ತಿದ್ದೇನೆ. ಇದರ ಜತೆಗೆ ವೈಕುಂಠ ಏಕಾದಶಿಗೆ ಲಾಡು ಹಂಚುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಎರಡು ಧಾರ್ಮಿಕ ಕಾರ್ಯಕ್ರಮಗಳುತಮಗೆ ಅತೀವ ಆತ್ಮ ತೃಪ್ತಿ ನೀಡಿವೆ ಎಂದರು. 

SCROLL FOR NEXT